ಉಪಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರು ಮಂತ್ರಿಯಾಗುವುದು ನಿಶ್ಚಿತವಾಗಿದ್ದು ಎಚ್.ವಿಶ್ವನಾಥ್ ಅವರನ್ನು ಮಂತ್ರಿ ಮಾಡಲು ನಾವೆಲ್ಲ ಪ್ರಯತ್ನಿಸುತ್ತೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು..
ಶಾಸಕರಾದ ಮಹೇಶ್ ಕುಮಠಹಳ್ಳಿ, ಶ್ರೀಮಂತ ಪಾಟೀಲ್, ಮಾಜಿ ಸಚಿವ ಆರ್.ಶಂಕರ್ ಜೊತೆ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಸಿಎಂ ಯಡಿಯೂರಪ್ಪ ಹೇಳಿದ್ದು ನಿಜ. ಅವರು ನಮ್ಮ ನಾಯಕರು.
ನಮ್ಮ ತಂಡಕ್ಕೆ ಬಲ ಬಂದಿದ್ದೇ ವಿಶ್ವನಾಥ್ ರವರರಿಂದ ಹೀಗಾಗಿ ವಿಶ್ವನಾಥ್ ಅವರನ್ನು ಮಂತ್ರಿ ಮಾಡುವಂತೆ ನಮ್ಮ ಒತ್ತಾಯವಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೊ ನೋಡೋಣ ಎಂದರು.ನಾವು ನರೇಂದ್ರ ಮೋದಿ, ಅಮಿತ್ ಶಾ ನಾಯಕತ್ವ ಹಾಗೂ ಸಿಎಂ ಯಡಿಯೂರಪ್ಪ ಅವರ ಗಟ್ಟಿತನ ನೋಡಿ ಬಿಜೆಪಿ ಸೇರ್ಪಡೆಗೊಂಡಿದ್ದೇವೆ.
ಮೂರು ವರ್ಷಗಳ ಕಾಲ ಅಭಿವೃದ್ದಿ ಮುಖ್ಯ. ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೂ ಸರಿ ಕೊಡದಿದ್ದರು ಸರಿ ನಮ್ಮನ್ನು ಮಂತ್ರಿ ಮಾಡಿದರೂ ಖುಷಿ, ಮಾಡದಿದ್ದರೂ ಖುಷಿ ಒಂದು ತಿಂಗಳು ತಡವಾಗಿ ಮಂತ್ರಿ ಮಂಡಲ ರಚನೆಯಾದರು ಪರವಾಗಿಲ್ಲ ಎಂದು ಹೇಳಿದರು.
ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪಿನ ಮುನ್ನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಹರಕೆ ಹೊತ್ತಿದ್ದೆ. ಹೀಗಾಗಿ ಹರಕೆ ತಿರಿಸುತ್ತಿದ್ದೇವೆ ತಿಳಿಸಿದರು.
ಸಚಿವ ಆರ್.ಶಂಕರ್ ಮಾತನಾಡಿ, ನಾನು ಮಂತ್ರಿಗಾಗಿ ಲಾಬಿ ಮಾಡಲ್ಲ. ಸಿಎಂ ಚುನಾವಣೆಯಲ್ಲಿ ಸ್ಪರ್ಧೆ ಬೇಡ ಅಂತ ಹೇಳಿರುವುದು ವರದಾನ ಆಗಬಹುದು. ನನ್ನನ್ನು ಪರಿಗಣಿಸುವ ಆಶಾಭಾವನೆಯಿದೆ. ಸಿಎಂ ಮೇಲೆ ನನಗೆ ನಂಬಿಕೆಯಿದೆ, ಅವರಿಗೆ ಮುಜುಗರ ತರುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಶ್ವೇತವಸ್ತ್ರ, ಫಲತಾಂಬೂಲ ನೀಡಿ ಅವರನ್ನು ಗೌರವಿಸಲಾಯಿತು.