ಮುಸ್ಲಿಮರ ವಿರುದ್ಧ ಪೋಸ್ಟ್ ಹಾಕಿದ ಹಿಂದುತ್ವ ಸಂಘಟನೆಯ ಕಾರ್ಯಕರ್ತನ ಬಂಧನ: ಆರೋಪಿ ಪರ ನಿಂತ ಸಚಿವ ಸಿ.ಟಿ ರವಿ – ಪೊಲೀಸರ ವಿರುದ್ದವೇ ತನಿಖೆ!
ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್ ಶ್ರೀನಿವಾಸಗೌಡರವರು ಆಕ್ಷೇಪಾರ್ಹ ಪೋಸ್ಟ್ ಹಾಕಿದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಬೇಲೂರು ಸಿಪಿಐ ಸಿದ್ಧರಾಮೇಶ್ವರ್, ಅರೇಹಳ್ಳಿ ಪಿಎಸ್ಐ ಬಾಲು ಎಂಬ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ
ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಕೋಮುದ್ವೇಷಪೂರಿತ ಪೋಸ್ಟ್ ಹಾಕಿದ ಆರೋಪದ ಮೇಲೆ ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಬಿಕ್ಕೋಡಿನ ತೇಜಕುಮಾರ್ ಶೆಟ್ಟಿ ಎಂಬುವವರನ್ನು ಬಂಧಿಸಿದ್ದ ಪೊಲೀಸರ ವಿರುದ್ಧವೇ ತನಿಖೆ ನಡೆಯುವಂತ ಪರಿಸ್ಥಿತಿ ಎದುರಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮ ಹಾಗೂ ವ್ಯಕ್ತಿಯ ನಿಂದನೆಯಾಗಲಿ ಮಾಡಬಾರದು ಎಂದು ಈಗಾಗಲೇ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಆದೇಶ ಇದ್ದರೂ ಸಹ ಅದನ್ನು ಲೆಕ್ಕಿಸದೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರಿಂದ, ಕಲಂ 152ರ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ ಎಂದು ಬೇಲೂರು ಸಿಪಿಐ ಸಿದ್ಧರಾಮೇಶ್ವರ್, ಅರೇಹಳ್ಳಿ ಪಿಎಸ್ಐ ಬಾಲು ತಿಳಿಸಿದ್ದರು. ಬಂಧಿತ ವ್ಯಕ್ತಿಯೊಂದಿಗಿನ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದೇ ಸಮುಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಸಹ ಎರಡು ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿಯೂ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರ ವಿರುದ್ಧ ಸುಳ್ಳು ಸುದ್ದಿ ಹರಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಖಡಕ್ ಎಚ್ಚರಿಕೆ ಸಹ ನೀಡಿದ್ದರು.