ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೆವೆ. ಆದರೆ ಪ್ರಧಾನಿ ಬರೀ ಭಾಷಣ ಮಾಡಿದ್ರೆ ಸಾಲದು. ಬಡವರಿಗೆ ಯಾವ ರೀತಿಯ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂಬುವುದು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ಅವರ ಮೇಲೆ ಅಪಾರವಾದ ಗೌರವವಿದೆ. ಅವರ ನೀಡಿದಂತ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತೆವೆ. ಸರ್ಕಾರದೊಂದಿಗೆ ನಾವು ಸಹ ಕೈ ಜೋಡಿಸಿ, ನೀಡಿರುವ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತೆವೆ. ಕೊರೊನಾ ನಿಯಂತ್ರಣಕ್ಕೆ ಹೋರಾಡುತ್ತಿವೆ ಎಂದರು.
ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಮಾತನಾಡಿದರು. ಮೊದಲ ಹಂತದ ಲಾಕ್ ಡೌನ್ ಪೂರ್ಣಗೊಂಡು ಮತ್ತೆ ಮೇ.3ರವರೆಗೆ ವಿಸ್ತರಿಸಿದ್ದಾರೆ. ಲಾಕ್ ಡೌನ್ ಅನ್ನು ಎಲ್ಲರೂ ಪಾಲಿಸುತ್ತಿದ್ದಾರೆ. ಅವರ ಭಾಷಣದಲ್ಲಿ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಆದರೆ ಅವು ಅವರ ಭಾಷಣದಲ್ಲಿ ಇರಲಿಲ್ಲ. ಇದು ನೋವಿನ ಸಂಗತಿಯಾಗಿದೆ. ಜನರು , ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು ಅವರಿಗೆ ಪರಿಹಾರ ಒದಗಿಸುವ ಹಾಗೂ ಬಡವರಿಗೆ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ ಎಂದುಕೊಂಡಿದ್ದೆವು ಎಂದು ಕಳವಳ ವ್ಯಕ್ತ ಪಡಿಸಿದರು.
ರೈತರು, ಕೆಲಸಗಾರರು, ಕೂಲಿ ಕಾರ್ಮಿಕರು ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ರೈತರ ಬೆಳೆದ ತರಕಾರಿಗಳನ್ನು ಖರೀದಿ ಮಾಡುವವರೆ ಇಲ್ಲ. ಇದರಿಂದ ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ. ನಾನೇ ನೇರವಾಗಿ ರೈತರನ್ನು ಭೇಟಿ ಮಾಡಿದ್ದೆನೆ ಎಂದರು.