ಬೆಳಗಾವಿ: ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಮಾನಸಿಕ ಅಸ್ವಸ್ಥ ಎಂದು ಹೇಳುವುದು ಸರಿಯಲ್ಲ ಅಂತಾ ಮಾಜಿ ಸಚಿವ ಸತೀಶ ಜಾರಕಿಹೊಳಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬಾಂಬರ್ ಆದಿತ್ಯ ಮಾನಸಿಕವಾಗಿ ನೊಂದಿದ್ದ ಎಂಬ ಗೃಹಸಚಿವ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,
ಆರೋಪಿ ಸಿಗುವ ಮೊದಲು ಯಾರೋ ಇರಬಹುದು ಅಂತಾ ಪ್ರಕರಣ ದೊಡ್ಡ ಮಟ್ಟಿಗೆ ಒಯ್ದಿದ್ದರು. ಈಗ ತಮ್ಮವರೇ ಇರುವುದರಿಂದ ಬೇರೆ ರೀತಿ ಟ್ವಿಸ್ಟ್ ಮಾಡುತ್ತಿದ್ದಾರೆ. ಯಾವುದೇ ಧರ್ಮ, ಜಾತಿಗೆ ಸೇರಿದ್ರೂ ಆತ ದೇಶದ್ರೋಹದ ಕೆಲಸ ಮಾಡಿದ್ದಾನೆ. ಈ ವಿಚಾರದಲ್ಲಿ ಯಾವುದೇ ಪಕ್ಷದವರು ಸಮರ್ಥಿಸಿಕೊಳ್ಳಬಾರದು ಎಂದು ಹೇಳಿದರು.
ಪೊಲೀಸ್ ತನಿಖೆ ನಡೆಯುವಾಗ ಈ ರೀತಿ ಹೇಳಿಕೆ ಕೊಡಬಾರದು. ಮಾನಸಿಕವಾಗಿ ಸರಿಯಿಲ್ಲ ಅಂತಾ ಹೇಳುವವರು ವೈದ್ಯರು. ಅವರಲ್ಲೇ ಸಹಕಾರ್ಯಕರ್ತ ಮಾಡಿದ್ದರಿಂದ ಬೇರೆ ಬೇರೆ ರೀತಿಯಲ್ಲಿ ಸಮರ್ಥನೆ ನೀಡುವ ಪ್ರಯತ್ನ ನಡೆದಿದೆ.ಈ ವಿಚಾರದಲ್ಲಿ ಯಾವುದೇ ಪಕ್ಷ ಇದ್ರೂ ರಾಜಕೀಯ ಮಾಡಬಾರದು. ದೇಶದ ಭದ್ರತೆ ಬಂದಾಗ ಎಲ್ಲರೂ ಒಂದೇ ಗಟ್ಟಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಆರೋಪಿ ಸಿಕ್ಕಿಹಾಕಿಕೊಂಡಿದ್ದು ತನಿಖೆ ಬಳಿಕ ನಿಜ ಸತ್ಯಾಂಶ ಹೊರಬರಬೇಕಿದೆ ಎಂದರು.