ಮೂಡಲಗಿ: ಕೊರೊನಾ ವೈರಸ್ ದೇಶವನ್ನೇ ಬೆಚ್ಚಿ ಬಿಳಿಸಿದೆ. ಪ್ರತಿಯೊಬ್ಬರು ತಮ್ಮ ಜೀವ ಉಳಿಸಿಕೊಳ್ಳಬೇಕಾದರೆ ಸಾಮಾಜಿಕ ಅಂತರದ ಕಾಯ್ದುಕೊಳ್ಳಬೇಕು. ಅನಗತ್ಯ ಮನೆಯಿಂದ ಹೊರಗೆ ತಿರಗಾಡದಿರಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ತಾಲ್ಲೂಕಿನ ಸುಣಧೋಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಶಾಸಕ ಬಾಲಚಂದ್ರ ಜಾರಕಿಹೊಳಿ ನಿರ್ದೇಶನದಂತೆ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ದೇಶಕ್ಕೆ ದೇಶವೇ ಈ ಮಾರಕ ವೈರಲ್ ವೈರಸ್ದಿಂದಾಗಿ ಮನುಕುಲ ಅಪಾಯದ ಅಂಚಿನಲ್ಲಿದೆ. ಈ ಮಾರಕ ರೋಗ ತಡೆಯಲು ನಾವು ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳುವ ಮೂಲಕ ಪಾರಾಗಬಹುದು. ತಾಲೂಕಾಡಳಿತದಿಂದ ಸಾರ್ವಜನಿಕರಿಕೆ ತೊಂದರೆಯಾಗದ ನಿಟ್ಟಿನಲ್ಲಿ ಸಮರೋಪಾಧಿಯಲ್ಲಿ ಕಾರ್ಯವಾಗುತ್ತಿದೆ. ಅಗತ್ಯ ದಿನಸಿ ತರಕಾರಿ ಹಾಲು ವಸ್ತುಗಳನ್ನು ನಿಗದಿತ ಅವಧಿಯಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಖರೀದಿಸಿ ಮನೆಯಲ್ಲಿಯೇ ಅರಾಮಾಗಿರಬೇಕು. ಗ್ರಾಮ ಪಂಚಾಯತಿ ತೆಗೆದುಕೊಳ್ಳುವ ಕ್ರಮಗಳನ್ನು ಸಾರ್ವಜನಿಕರು ಅಚ್ಚುಕಟ್ಟಾಗಿ ಪಾಲಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕರಿಸಬೇಕು.
ಅಪಾಯದ ಕುರಿತು ಅರಿವಾದ ಕೂಡಲೇ ಆಶಾ ಕಾರ್ಯಕರ್ತೆಯರು, ಸ್ಥಳೀಯ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯ ದಿನ ಬಳಕೆ ವಸ್ತುಗಳನ್ನು ಗ್ರಾಮೀಣ ಭಾಗಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕಾಡಳಿತ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಎರಡು ತಾಸಿಗೊಮ್ಮೆ ಕೈ ತೊಳೆದುಕೊಳ್ಳುವ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು. ಕೈಯಿಂದ, ಕೆಮ್ಮು, ಸೀನಿದಾಗ ಅಷ್ಟೇ ಅಲ್ಲದೆ ಕಣ್ಣಿನ ಮೂಲಕವು ಹರಡುವದರಿಂದ ಇವುಗಳಿಂದ ದೂರ ವಿರಲು ಪ್ರಯತ್ನಿಸಿ. ಲಾಕ್ ಡೌನ್ ಹಾಗೂ ಕಫ್ರ್ಯೂ ಇರುವದರಿಂದ ಕಾನೂನು ಪರಿಪಾಲಿಸುವ ಮೂಲಕ ಮಹಾ ಮಾರಿ ಕೊರೋನಾ ವಿರುದ್ದ ಮಹಾಸಮರ ಸಾರುವ ಮೂಲಕ ಹತ್ತಿಕ್ಕಲು ಎಲ್ಲರೂ ಸಹಕರಿಸಬೇಕೆಂದರು.
ಬಿಇಒ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ಕೊರೋನಾ ಹತೋಟಿಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಪ್ರಧಾನಮಂತ್ರಿಯವರು ನೀಡಿರುವ ಲಾಕ್ ಡೌನ್ ಪಾಲಿಸಬೇಕು. ಅನಗತ್ಯ ಕಿರಿಕಿರಿ ಉಂಟಾದರೆ ಕಾನೂನಿನ ಪ್ರಕಾರ ಅಗತ್ಯ ಕ್ರಮವಹಿಸಲಾಗುವದು. ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಜೊತೆಗೆ ತಮ್ಮ ಮನೆ ಅಕ್ಕ ಪಕ್ಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶಿಕ್ಷಕರು, ಆಶಾಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ಪಂಚಾಯತ ಸಿಬ್ಬಂದಿ ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೊರೋನಾ ವೈರಲ್ ವೈರಸ್ ಹರಡದಂತೆ ಕ್ರಮಕೈಗೊಳ್ಳಲು ಸಲಹೆ ನೀಡಿದರು.
ಸುಣಧೋಳಿ ಗ್ರಾಮ ವ್ಯಾಪ್ತಿಯಲ್ಲಿ ಮೇಡಿಕಲ್ಸ್, ಸಂತೆ, ದಿನಸಿ ಅಂಗಡಿಗಳ ಮುಂದೆ ಹಾಗೂ ಗ್ರಾ.ಪಂನ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಹಾಕಲಾಯಿತು.
ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಸಿದ್ದಾಪೂರ, ಸಿ.ಎಸ್ ವಾಲಿ, ಡಾ.ಪ್ರಶಾಂತ ಸಣ್ಣಕ್ಕಿ, ಗ್ರಾ.ಪಂ ಮಾಜಿ ಅಧ್ಯಕ್ಷ ಭೀಮಶಿ ಹೂವನ್ನವರ, ಕೆ.ಎಸ್ ಕಮತಿ, ಜಿ.ಬಿ ಪಾಟೀಲ, ಬಸವರಾಜ ಗೌಡರ, ರಾಜಕುಮಾರ ವಾಲಿ, ಬಸವರಾಜ ಗಾಣಿಗೇರ,ಬಸು ಸಿದ್ದಾಪೂರ, ಸಿದ್ದಪ್ಪ ಹರಿಜನ, ಪರಶುರಾಮ ಭಜಂತ್ರಿ, ಪಿಡಿಒ ಗಂಗಾಧರ ಮಲ್ಹಾರಿ, ಸಿ.ಆರ್.ಪಿ ಎಮ್.ಪಿ ಹಿರೇಮಠ, ಸಾಹಿತ್ಯ ಪರಿಷತ್ತ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ, ಕೆ.ಎಲ್.ಮೀಶಿ, ಕಾರ್ಯದರ್ಶಿ ಶಿವಾನಂದ ಪತ್ತಾರ, ಲೆಕ್ಕಿಗ ಬಸವರಾಜ ದೊಡಮನಿ ಇತರರು ಇದ್ದರು.