ಘೋಡೋಂಗ್ರಿ (ಕೇರಳ): ಈಗಿನ ಕಾಲದಲ್ಲಿ ಅನೇಕ ಹುಡುಗರು ತಮಗೆ ಹುಡುಗಿಯೇ ಸಿಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ, ಇನ್ನು ಕೆಲವು ಹುಡುಗರಿಗೆ ತಾವು ಪ್ರೀತಿಸಿದ ಹುಡುಗಿಯ ಜತೆ ಮದುವೆಯಾಗಲು ಸಾಧ್ಯವಾಗುವುದಿಲ್ಲ, ಅನಿವಾರ್ಯವಾಗಿ ಕಟ್ಟುಪಾಡಿಗೆ ಒಳಗಾಗಿ ಅಪ್ಪ-ಅಪ್ಪ ತೋರಿಸಿದ ಹುಡುಗಿಯನ್ನು ಮದುವೆಯಾಗಬೇಕಾಗುತ್ತದೆ.
ಇವೆಲ್ಲಾ ಸಮಸ್ಯೆಗಳ ನಡುವೆಯೇ, ಕೇರಳ ಜಿಲ್ಲೆಯ ಘೋಡೋಂಗ್ರಿ ತಹಸಿಲ್ನ ಕೆರಿಯಾ ಗ್ರಾಮದ ಯುವಕನೊಬ್ಬ ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸಿದ್ದಾನೆ. ಒಂದೇ ಬಾರಿಗೆ ಇಬ್ಬರು ಯುವತಿಯನ್ನು ಮದುವೆಯಾಗುವ ಮೂಲಕ ಇದೀಗ ಭಾರಿ ಸುದ್ದಿ ಮಾಡಿದ್ದಾನೆ.
ಜೂನ್ 29 ರಂದು ಇಬ್ಬರ ಜತೆಯೂ ಸಪ್ತಪದಿ ತುಳಿದಿರುವ ಈತನ ಮದುವೆಗೆ ಎರಡೂ ಹೆಣ್ಣಿನ ಮನೆಯವರು ಮಾತ್ರವಲ್ಲದೇ ಗ್ರಾಮಸ್ಥರೂ ಸಾಕ್ಷಿಯಾಗಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಸಂದೀಪ್ ಸುನಂದಾ ಎಂಬ ಯುವತಿಯನ್ನು ಪ್ರೀತಿಸಿದ್ದ. ಆದರೆ ಮನೆಯವರಿಗೆ ಈ ವಿಷಯ ತಿಳಿಸಿರಲಿಲ್ಲ. ತಮ್ಮ ಮಗ ತಾವು ಹೇಳಿದ ಹುಡುಗಿಯನ್ನೇ ಮದುವೆಯಾಗುತ್ತಾನೆ ಎಂದು ನಂಬಿದ್ದ ಪಾಲಕರು ಶಶಿಕಲಾ ಎಂಬಾಕೆಯ ಜತೆ ಮದುವೆ ಫಿಕ್ಸ್ ಮಾಡಿದ್ದರು.
ತನ್ನ ಮದುವೆ ಬೇರೆ ಹುಡುಗಿಯ ಜತೆ ಫಿಕ್ಸ್ ಆಗಿದ್ದು, ತಿಳಿಯುತ್ತಲೇ ತಾನು ಪ್ರೀತಿಸುತ್ತಿರುವ ವಿಷಯವನ್ನು ಬಾಯಿಬಿಟ್ಟಿದ್ದಾನೆ ಸಂದೀಪ. ಅದರೆ ತಾವು ಹುಡುಗಿ ಮನೆಯವರಿಗೆ ಮಾತು ಕೊಟ್ಟಿರುವ ಕಾರಣ, ಯಾವುದೇ ಕಾರಣಕ್ಕೂ ಆಕೆಯನ್ನೇ ಮದುವೆಯಾಗಬೇಕು ಎನ್ನುವುದು ಮನೆಯವರ ಹಠ. ಆದರೆ ತಾನು ಪ್ರೀತಿಸಿರುವ ಹುಡುಗಿಯನ್ನೇ ಮದುವೆಯಾಗುವುದಾಗಿ ಆಕೆಗೆ ಮಾತು ಕೊಟ್ಟಿರುವುದಾಗಿ ಈತನ ವಾದ.
ಭಾರಿ ವಾದ-ಪ್ರತಿವಾದ-ವಿವಾದ ಎಲ್ಲವೂ ಆದ ಬಳಿಕ ಎಲ್ಲರೂ ಒಟ್ಟಿಗೇ ಕೂತು ಒಂದು ನಿರ್ಧಾರಕ್ಕೆ ಬಂದರು. ಅದೇನೆಂದರೆ ಅತ್ತ ಪ್ರೇಯಸಿಗೂ ಅನ್ಯಾಯವಾಗಬಾರದು, ಇತ್ತ ತಾವು ನೋಡಿದ ಹೆಣ್ಣಿಗೂ ಅನ್ಯಾಯ ಆಗಬಾರದು ಎನ್ನುವ ಕಾರಣಕ್ಕೆ ಇಬ್ಬರನ್ನೂ ಮಗನಿಗೆ ಕೊಟ್ಟು ಮದುವೆ ಮಾಡುವ ನಿರ್ಧಾರಕ್ಕೆ ಬಂದರು ಪಾಲಕರು. ಇದಕ್ಕೆ ಸಂದೀಪನೂ ಸಂತೋಷದಿಂದ ಒಪ್ಪಿಕೊಂಡ!
ಎಲ್ಲ ಮನೆಯವರೂ ಒಪ್ಪಿದ ಕಾರಣ, ಮದುವೆಯೂ ಭರ್ಜರಿಯಾಗಿ ನಡೆಯಿತು. ಈ ಬಗ್ಗೆ ಸ್ಥಳೀಯ ಆಡಳಿತ ವಿಚಾರಣೆ ಶುರು ಮಾಡಿದೆ.