Breaking News

ಮಣ್ಣಿನ ಚಾವಣಿ ಕುಸಿದು ಬಿದ್ದು ಒಂದೇ ಕುಟುಂಬದ ಐವರು ಮಹಿಳೆಯರು ದಾರುಣ ಸಾವು

Spread the love

ಹೈದರಾಬಾದ್​: ಪೂರ್ವಜರು ಕಟ್ಟಿಸಿದ್ದ ಹಳೇ ಮನೆಯ ಮಣ್ಣಿನ ಚಾವಣಿ ಕುಸಿದು ಬಿದ್ದು ಒಂದೇ ಕುಟುಂಬದ ಐವರು ಮಹಿಳೆಯರು ದಾರುಣ ಸಾವಿಗೀಡಾಗಿರುವ ಘಟನೆ ತೆಲಂಗಾಣದ ವಾನಪರ್ತೆ ಜಿಲ್ಲೆಯಲ್ಲಿ ನಡೆದಿದೆ. ದುರಂತವೆಂದರೆ ಸಾವಿಗೂ ಮುನ್ನ ಐವರು ಸಹ ಕುಟುಂಬದ ಸದಸ್ಯರೊಬ್ಬರ ತಿಥಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಗೋಪಾಲ್​ಪೇಟೆ ಮಂಡಲದ ಬುದ್ದರಾಮ್ ಗ್ರಾಮದಲ್ಲಿ ಇಂದು (ಅ.25) ಬೆಳ್ಳಂಬೆಳಗ್ಗೆ ದುರ್ಘಟನೆ ಸಂಭವಿಸಿದೆ. ನಾಲ್ವರು ಗಂಡು ಮಕ್ಕಳು ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಸೇರಿ ತಂದೆಯ ವರ್ಷದ ತಿಥಿ ಕಾರ್ಯ ನೆರವೇರಿಸುತ್ತಿದ್ದರು. ಈ ಕಾರ್ಯಕ್ರಮ ತಮ್ಮ ಪೂರ್ವಜರ ಮನೆಯಲ್ಲಿ ನಡೆಯುತ್ತಿತ್ತು. ಶನಿವಾರವೇ ಎಲ್ಲ ಕಾರ್ಯವನ್ನು ಮುಗಿಸಿ ರಾತ್ರಿ ಸವಿ ನಿದ್ದೆಗೆ ಜಾರಿದ್ದರು.ಬೆಳ್ಳಂಬೆಳಗ್ಗೆಯೇ ಮಲಗಿದ್ದವರ ಮೇಲೆ ಮಣ್ಣಿನ ಚಾವಣಿ ಕುಸಿದಿದೆ.

ಪರಿಣಾಮ ಐವರು ಮಹಿಳೆಯರು ಮೃತಪಟ್ಟಿದ್ದಾರೆ. ಮೃತರನ್ನು ಚೆವ್ವ ಮನೆಮ್ಮ (68), ಸುಪ್ರಜಾ (38), ವೈಷ್ಣವಿ (21), ರಿಂಕಿ (18) ಮತ್ತು ಉಮಾದೇವಿ (38) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಮೃತರ ಕುಟುಂಬಕ್ಕೆ ತೆಲಂಗಾಣ ಕೃಷಿ ಸಚಿವ ಹಾಗೂ ವಾನಪರ್ತೆ ಜಿಲ್ಲೆಯವರಾದ ಎಸ್​. ನಿರಂಜನ್​ ರೆಡ್ಡಿ ಸಾಂತ್ವಾನ ಹೇಳಿದ್ದಾರೆ.

ಕಳೆದ ಒಂದು ತಿಂಗಳಿಂದ ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾಕಷ್ಟು ಆಸ್ತಿ-ಪಾಸ್ತಿ, ಪ್ರಾಣ ಹಾನಿ ಸಂಭವಿಸಿದೆ. ಕಟ್ಟಡ ಕುಸಿತದಂತಹ ಅನೇಕ ದುರ್ಘಟನೆಗಳು ನಡೆದಿವೆ. ಹೈದರಾಬಾದಿನ ಅನೇಕ ಏರಿಯಾಗಳು ಈಗಲೂ ಜಲಾವೃತಗೊಂಡಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ನಾಗರಿಕರು ಪ್ರವಾಹದಿಂದ ಸಂಕಷ್ಟ ಅನುಭವಿಸಿದ್ದಾರೆ


Spread the love

About Laxminews 24x7

Check Also

ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

Spread the loveಮೈಸೂರು: ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ