Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಮೂರು ದಿನಗಳೊಳಗೆ ಸಂತ್ರಸ್ತರ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂರು ದಿನಗಳೊಳಗೆ ಸಂತ್ರಸ್ತರ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ : ಕಳೆದ ಜುಲೈ ತಿಂಗಳಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನದಿ ತೀರದ ಗ್ರಾಮಗಳ ಸಂತ್ರಸ್ತರು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬುಧವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದ ಆವರಣದಲ್ಲಿ ಅರಭಾವಿ ಕ್ಷೇತ್ರದ 21 ಗ್ರಾಮಗಳ ನದಿ ತೀರದ ಸಂತ್ರಸ್ತರು ಶಾಸಕರ ಬಳಿ ಅಳಲು ಮಂಡಿಸಿದರು.
ನದಿ ತೀರದ ಗ್ರಾಮಗಳಾದ ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ, ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಮಸಗುಪ್ಪಿ, ಹುಣಶ್ಯಾಳ ಪಿಜಿ, ಬೀರನಗಡ್ಡಿ, ಬಳೋಬಾಳ, ನಲ್ಲಾನಟ್ಟಿ, ಬಸಳಿಗುಂದಿ, ಲೋಳಸೂರ ಸಂತ್ರಸ್ತರು ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡಿದ್ದು, ಕೂಡಲೇ ತಮಗೆ ವಾಸಿಸಲು ಸೂರು ಕಲ್ಪಿಸಿಕೊಡುವಂತೆ ಶಾಸಕರನ್ನು ಕೋರಿದರು.
ಮನೆಗಳ ಮಂಜೂರಾತಿಗಾಗಿ ಯಾರಿಗೂ ದುಡ್ಡು ನೀಡಬೇಡಿ : ಬಾಲಚಂದ್ರ ಜಾರಕಿಹೊಳಿ ಖಡಕ್ ವಾರ್ನಿಂಗ್
ಸಾವಿರಕ್ಕೂ ಅಧಿಕ ಸಂತ್ರಸ್ತರನ್ನು ಉದ್ಧೇಶಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ನಾಳೆ ಗುರುವಾರದಿಂದ ಶನಿವಾರದೊಳಗೆ ನದಿ ತೀರದ ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬೇಕು. ಅಧಿಕಾರಿಗಳ ಸಮೀಕ್ಷೆ ತಂಡಕ್ಕೆ ನಮ್ಮ ಟೀಂ ಎನ್‍ಎಸ್‍ಎಫ್ ಸಾಥ್ ನೀಡಲಿದೆ. ಸಮೀಕ್ಷೆಗೆ ಬರುವ ಅಧಿಕಾರಿಗಳೊಂದಿಗೆ ಸಂತ್ರಸ್ತರು ಸೌಜನ್ಯಯುತವಾಗಿ ವರ್ತಿಸಬೇಕು. ಅವರೊಂದಿಗೆ ಯಾವುದೇ ಕಾರಣಕ್ಕೂ ವಾಗ್ವಾದಕ್ಕಿಳಿಯಬಾರದು. ಅಧಿಕಾರಿಗಳು ಸಹ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಬಡವರಿಗೆ ಸೂರು ಕಲ್ಪಿಸಲು ಅಗತ್ಯವಿರುವ ಎಲ್ಲ ಸಹಕಾರ ನೀಡಬೇಕು. ಪ್ರವಾಹ ಮತ್ತು ಮಳೆಯಿಂದಾಗಿ ಯಾರೂ ಮನೆಗಳನ್ನು ಕಳೆದುಕೊಂಡಿದ್ದಾರೋ ಅಂತಹವರನ್ನು ಗುರುತಿಸಬೇಕು. ಸಂತ್ರಸ್ತರಿಂದ ದುಡ್ಡನ್ನು ಪಡೆಯುತ್ತಿದ್ದಾರೆಂಬ ಆರೋಪಗಳು ಕೂಡ ಬರುತ್ತಿವೆ. ಒಂದು ವೇಳೆ ಅಧಿಕಾರಿಗಳು ಬಡ ಕುಟುಂಬಗಳಿಂದ ಹಣ ಪಡೆದಿದ್ದೇ ಆದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮನೆಗಳ ಮಂಜೂರಾತಿಗಾಗಿ ಯಾರಿಗೂ ದುಡ್ಡು ನೀಡಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತ್ರಸ್ತರಿಗೆ ತಾಕೀತು ಮಾಡಿದರು.
ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರವೇ 5 ಲಕ್ಷ ರೂ.ಗಳನ್ನು ನೀಡುತ್ತಿದೆ. ಇದರಿಂದ ಬಡ ಕುಟುಂಬಗಳಿಗೆ ನೆರವು ಕಲ್ಪಿಸಿದಂತಾಗುತ್ತದೆ. ಇದರಲ್ಲಿ ಅನಾವಶ್ಯಕವಾಗಿ ರಾಜಕೀಯ ಬೆರೆಸಬೇಡಿ. ಕ್ಷೇತ್ರದಲ್ಲಿ ಅಂದಾಜು 1500 ಮನೆಗಳು ಪ್ರವಾಹದಿಂದಾಗಿ ಹಾನಿಗೀಡಾಗಿವೆ. ಈ ಎಲ್ಲ ಫಲಾನುಭವಿಗಳು ಅರ್ಹರೋ? ಅಥವಾ ಅನರ್ಹರೋ ಎಂಬುದನ್ನು ಅಧಿಕಾರಿಗಳೇ ಗುರುತಿಸಬೇಕು. ಉಚಿತವಾಗಿ ಮನೆಗಳ ಉತಾರ ನೀಡಬೇಕು. ಬಡ ಕುಟುಂಬಗಳಿಂದ ಹಣ ಪಡೆದರೆ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎಚ್ಚರಿಕೆ ನೀಡಿದರು.
ಸಂತ್ರಸ್ತರಿಗೆ ಸೂರು ಕಲ್ಪಿಸಲು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ
ಸಂತ್ರಸ್ತ ಫಲಾನುಭವಿಗಳಿಂದ ಮನವಿ ಸ್ವೀಕರಿಸಿದ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳ ಸಭೆಯನ್ನು ನಡೆಸಿದರು.
ಮೂರು ದಿನಗಳೊಳಗೆ ಸಮೀಕ್ಷೆ ಕಾರ್ಯ ನಡೆಸಿ ಅಂತಿಮ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, 2019 ರಿಂದ ಇಲ್ಲಿಯವರೆಗೆ ಸಂತ್ರಸ್ತ ಫಲಾನುಭವಿಗಳಿಗೆ ಕೆಲವು ಕಾರಣಾಂತರಗಳಿಂದ ಸಮರ್ಪಕ ಪರಿಹಾರ ದೊರೆತಿಲ್ಲ. ಅವುಗಳನ್ನು ಕೂಡಲೇ ಸರಿಪಡಿಸಿ ನದಿ ತೀರದ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಪ್ರಸಕ್ತ ಸಾಲಿನ ಪ್ರವಾಹ ಸಂದರ್ಭದಲ್ಲಿ ಮನೆಗಳಿಗೆ ನೀರು ಪ್ರವೇಶಿಸಿದ ಬಾಕಿ ಫಲಾನುಭವಿಗಳಿಗೆ 10 ಸಾವಿರ ರೂ.ಗಳ ಪರಿಹಾರ ಧನ ಚೆಕ್‍ಗಳನ್ನು ಕೂಡಲೇ ವಿತರಿಸಬೇಕು. ಹಾನಿಯಾದ ಬೆಳೆಗಳ ಬಗ್ಗೆ ಸಮೀಕ್ಷೆ ಮಾಡಿ ಪರಿಹಾರ ಒದಗಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ. ಶಶಿಧರ ಬಗಲಿ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಪಿಐ ಶ್ರೀಶೈಲ ಬ್ಯಾಕೂಡ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಅರಭಾವಿ ಮತಕ್ಷೇತ್ರದ ಪಿಡಿಓ, ಇಂಜನೀಯರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪಾಲ್ಗೊಂಡಿದ್ದರು.


ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದ ಆವರಣದಲ್ಲಿ ಘಟಪ್ರಭಾ ನದಿ ತೀರದ ಗ್ರಾಮಗಳ ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ಗೋಕಾಕ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರವಾಹ ಪೀಡಿತ ಸಂಬಂಧ ಗೋಕಾಕ ಹಾಗೂ ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಬೈಲಹೊಂಗಲ ಎಸಿ ಡಾ.ಶಶಿಧರ ಬಗಲಿ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ ಉಪಸ್ಥಿತರಿದ್ದರು.

 

ಸರಳತೆಗೆ ಸಾಕ್ಷಿಯಾದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಸಂತ್ರಸ್ತರಿಂದ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನದಿ ತೀರದ 21 ಗ್ರಾಮಗಳ ಸಂತ್ರಸ್ತ ಫಲಾನುಭವಿಗಳೊಂದಿಗೆ ನೆಲಕ್ಕೆ ಕುಳಿತುಕೊಂಡು ಚರ್ಚೆ ನಡೆಸುತ್ತಿರುವುದು ಶಾಸಕರ ಸರಳತೆಗೆ ಸಾಕ್ಷಿಯಾಯಿತು. ಶಾಸಕರ ಈ ನಡೆಗೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಸಂತ್ರಸ್ತರೊಂದಿಗೆ ಕುಳಿತುಕೊಂಡೇ ಸಮಸ್ಯೆಗಳನ್ನು ಅರಿತುಕೊಂಡ ಬಾಲಚಂದ್ರ ಜಾರಕಿಹೊಳಿ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆತುಕೊಂಡು ಮಾತನಾಡುತ್ತಿರುವುದು ಶಾಸಕರ ಸರಳ ನಡೆಗೆ ಸಾಕ್ಷಿಯಾಗಿದೆ. ಮೊದಲಿನಿಂದಲೂ ಕ್ಷೇತ್ರದ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕ್ಷೇತ್ರದ ಜನರೆಂದರೆ ಎಲ್ಲಿಲ್ಲದ ಪ್ರೀತಿ ತೋರುತ್ತಾರೆ. ಪ್ರತಿಯೊಂದು ಕುಟುಂಬಗಳ ಸಂಪರ್ಕವನ್ನು ಹೊಂದಿರುವ ಬಾಲಚಂದ್ರ ಜಾರಕಿಹೊಳಿ ಅವರ ನೆನಪಿನ ಶಕ್ತಿ ಅಗಾಧವಾಗಿದೆ. ಬಾಲಚಂದ್ರ ಅವರು ಇದರಿಂದ ಕಾಮನ್ ಮ್ಯಾನ್ ಆಗಿ ಗುರುತಿಸಿಕೊಂಡಿರುವುದು ಜನರ ಪ್ರೀತಿಗೆ ಸಾಕ್ಷಿಯಾಗಿದೆ.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ