ಮುಂಬೈ: ಬ್ಲೂ ಫಿಲ್ಮ್ಂ ಪ್ರಕಣದಲ್ಲಿ ಸಿಲುಕಿರುವ ಉದ್ಯಮಿ ರಾಜ್ ಕುಂದ್ರಾ ಪೊಲೀಸರ ವಶದಲ್ಲಿದ್ದರೆ, ಇತ್ತ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಮಾಧ್ಯಮಗಳ ವಿರುದ್ಧ.
ಪತಿ ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕುರಿತು ಸುಳ್ಳು ಮತ್ತು ಚಾರಿತ್ರ್ಯ ಹರಣ ಮಾಡುವಂತಹ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಜತೆಗೆ ಶಿಲ್ಪಾ ಅಳುತ್ತಿದ್ದಾರೆ, ಗಂಡನ ಜತೆ ಜಗಳವಾಡುತ್ತಿದ್ದಾರೆ ಇತ್ಯಾದಿಯಾಗಿ ಮಾನಹಾನಿಯಾಗುವಂಥ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ, ನಾನು ಅಳುವ ಫೋಟೋಗಳನ್ನು ಹಾಕುತ್ತಿದ್ದಾರೆ. ಆದ್ದರಿಂದ ನನ್ನ ಮಾನಹಾನಿಯಾಗಿದ್ದು 25 ಕೋಟಿ ರೂಪಾಯಿ ಪರಿಹಾರ ಬೇಕು ಎಂದು ಶಿಲ್ಪಾ ಶೆಟ್ಟಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ತಮ್ಮ ಅರ್ಜಿಯಲ್ಲಿ 29 ಮಾಧ್ಯಮ ಸಿಬ್ಬಂದಿ ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಆದರೆ ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಶಿಲ್ಪಾ ಶೆಟ್ಟಿಗೆ ಬುದ್ಧಿಮಾತು ಹೇಳಿದ್ದಾರೆ.
ಇಲ್ಲಿ ನಾವು ಕುಳಿತುಕೊಂಡು ಯಾವ ಮಾಧ್ಯಮ ಸಂಸ್ಥೆಗಳು ಯಾವ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡುತ್ತಿವೆ ಎನ್ನುವುದು ನೋಡುತ್ತಾ ಇರಬೇಕು ಎಂದು ನೀವು ಬಯಸುತ್ತೀರಾ? ಪೊಲೀಸ್ ಮೂಲಗಳನ್ನು ಆಧರಿಸಿದ ಸುದ್ದಿ ಮಾಡಲಾಗಿದೆ. ಇದು ದುರುದ್ದೇಶಪೂರಿತ ಮತ್ತು ಮಾನಹಾನಿಕರ ಎಂದು ಹೇಗೆ ಕರೆಯುತ್ತೀರಿ? ನೀವು ಸಾರ್ವಜನಿಕ ಜೀವನದಲ್ಲಿದ್ದವರು. ಆದ್ದರಿಂದ ಸಹಜವಾಗಿ ಜನರು ನಿಮ್ಮ ಜೀವನದ ಬಗ್ಗೆ ಆಸಕ್ತರಾಗಿರುತ್ತಾರೆ. ನಟಿ ಅಳುತ್ತಾರೆ ಮತ್ತು ತಮ್ಮ ಗಂಡನೊಂದಿಗೆ ಜಗಳವಾಡಿದ್ದಾರೆ ಎಂದು ಬರೆದರೆ ಅದು ಮಾನಹಾನಿ ಹೇಗೆ ಆಗುತ್ತದೆ ಎಂದು ಕೋರ್ಟ್ ಪ್ರಶ್ನಿಸಿತು. ಇಂಥ ವರದಿಯಲ್ಲಿ ಮಾನಹಾನಿ ಎನ್ನುವಂಥದ್ದು ನಮಗೆ ಏನೂ ಕಾಣಿಸುತ್ತಿಲ್ಲ ಎಂದ ಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.