ಯಾದಗಿರಿ: ಕೃಷ್ಣಾ ನದಿಗೆ ನೀರು ಬಿಟ್ಟ ಕಾರಣ ಮೀನುಗಾರರ ಗುಡಿಸಲುಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮ ಜಲಾವೃತಗೊಂಡ ಮನೆಗಳಿಂದ ಹೊರಬರಲು ಮೀನುಗಾರರು ಪರದಾಡಿದ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕದರಾಪುರದಲ್ಲಿ ನಡೆದಿದೆ.
ಕೃಷ್ಣಾ ನದಿಗೆ 4 ಲಕ್ಷ 20 ಸಾವಿರ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಕದರಾಪುರದ 40 ಮೀನುಗಾರರ ಗುಡಿಸಲುಗಳು ಜಲಾವೃತಗೊಂಡಿವೆ. ಅಪಾರ ಪ್ರಮಾಣದಲ್ಲಿ ನೀರು ಗುಡಿಸಲು ನುಗ್ಗಿದ್ದರಿಂದ ಹೊರಬರಲು ಪರದಾಡಿದ ಮೀನುಗಾರರು ತೆಪ್ಪದ ಮೂಲಕ ಹೊರ ಬಂದಿದ್ದಾರೆ.
ಸದ್ಯ ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ತೀರದ ಬಂಡೆಯ ಮೇಲೆ ಬೀಡು ಬಿಟ್ಟಿರುವ ಮೀನುಗಾರರ ಕುಟುಂಬ ನೆಲೆಸಲು ಶಾಶ್ವತ ಸ್ಥಳವಿಲ್ಲದೆ ಅಂತಂತ್ರ ಸ್ಥಿತಿಯಲ್ಲಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಪರದಾಡುತ್ತಿರೋ ಮೀನುಗಾರರು, ನಾಲ್ಕು ದಿನದಿಂದ ಪರದಾಡುತ್ತಿದ್ದರೂ ಜಿಲ್ಲಾಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.