ಚಾಮರಾಜನಗರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ರವಿ ಮನೆಗೆ ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕಿನ ಬೊಮ್ಮಲಾಪುರಕ್ಕೆ ಭೇಟಿ ನೀಡಿದ ಬಿಎಸ್ವೈ ಅವರು ಮೃತ ಅಭಿಮಾನಿಯ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಗಣೇಶ ಚತುರ್ಥಿಯ ನಂತರ ರಾಜ್ಯದ ತುಂಬ ಪ್ರವಾಸ ಮಾಡಲಿದ್ದೇನೆ ಎಂದಿದ್ದಾರೆ. ಪಕ್ಷವನ್ನು ಬಲ ಪಡಿಸಿವ ನಿಟ್ಟಿನಲ್ಲಿ ಪ್ರತಿ ವಾರಕ್ಕೆ ಒಂದು ಕ್ಷೇತ್ರದಂತೆ ಪ್ರವಾಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ 135 ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೈ ಕಮಾಂಡ್ಗೆ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.
ಲಿಂಗಾಯತ ನಾಯಕರನ್ನು ಸಿಎಂ ಮಾಡಿರುವ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್ವೈ, ಅಧಿಕಾರವೆಂಬುದು ಶಾಶ್ವತವಲ್ಲ. ಸಿಎಂ ಸ್ಥಾನಕ್ಕೆ ಒಬ್ಬ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇವೆ ಅಷ್ಟೇ. ಆದರೆ ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಸಂಯಮ ಕಳೆದುಕೊಂಡು ಮಾತನಾಡುತ್ತಿರುವುದು ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.
ಇನ್ನೂ ನೂತನ ಸಂಪುಟ ರಚನೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ, ಮತ್ತು ಸಂಪುಟ ರಚನೆಯಲ್ಲಿ ಸಲಹೆ ಕೂಡ ಕೊಡಲ್ಲ ಎಂದಿರುವ ಅವರು ಇನ್ನೇನು ಕೆಲವೇ ದಿನಗಳಲ್ಲಿ ಸಂಪುಟ ನಿರ್ಣಾಯಕವಾಗಲಿದೆ ಎಂದಿದ್ದಾರೆ.