ಬೆಂಗಳೂರು: ಲಿಂಗಾಯಿತ ಪಂಚಮಸಾಲಿ ಸಮಯದಾಯಕ್ಕೆ ಒಬಿಸಿ(2ಎ) ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಿಎಂ ಸ್ಥಾನ ಬದಲಾಗುವ ಮುನ್ನ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗದ ಮೀಸಲಾತಿಗೆ ಸೇರಿಸಬೇಕೆಂದು 39 ದಿನ ಪಾದಯಾತ್ರೆ ಕೈಗೊಂಡು ಒತ್ತಾಯಿಸಲಾಗಿತ್ತು. ಆಗ ಮುಂದಿನ 6 ತಿಂಗಳಲ್ಲಿ ಮೀಸಲಾತಿ ನೀಡುವುದಾಗಿಸಿಎಂ ಯಡಿಯೂರಪ್ಪ ಅವರು ಸದನದಲ್ಲಿ ಭರವಸೆ ಕೊಟ್ಟಿದ್ದ, ಹಿನ್ನೆಲೆಯಲ್ಲಿ ಮಾ. 15ಕ್ಕೆ ಪ್ರತಿಭಟನೆ ಅಂತ್ಯಗೊಳಿಸಲಾಗಿತ್ತು. ಆದರೆ, ಈಗ ಮುಖ್ಯಮಂತ್ರಿ ಬದಲಾವಣೆ ಆಗುವ ಮಾಹಿತಿ ಬರುತ್ತಿದೆ.
ಹೊಸ ಮುಖ್ಯಮಂತ್ರಿ ಬಂದ್ರೆ ಮತ್ತೆ ಪ್ರಕ್ರಿಯೆ ಮುಂದಕ್ಕೆ ಹೋಗುತ್ತದೆ. ಹೀಗಾಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರನಾಶ್ ಹೆಗ್ಡೆ ಅವರಿಗೆ ಮನವಿ ಕೊಡಲಾಗಿದ್ದು, ಶೀಘ್ರ ಸರ್ಕಾರಕ್ಕೆ ತಲುಪಿಸಲು ಒತ್ತಾಯಿಸಲಾಗಿದೆ. ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲೇ ನಮ್ಮಬೇಡಿಕೆ ಈಡೇರಿಸಿ ಕೊಟ್ಟು ಮಾತಿನಂತೆ ನಡೆದುಕೊಳ್ಳಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ನೆನಪು ಮಾಡುತ್ತಿದ್ದು, ರಾಜೀನಾಮೆ ನೀಡುವ ಮೊದಲು ವಿಶೇಷ ಸಂಚಿವ ಸಂಪುಟ ಸಭೆ ಕರೆದು ಬೇಡಿಕೆ ಬಗ್ಗೆ ಈಡೇರಿಸಬೇಕು. ಈಗಾಗಲೇ ಬಹುತೇಕ ಸ್ವಾಮೀಜಿಗಳು ಬೇರೆ ಕಾರಣಕ್ಕೆ ಸಿಎಂ ಭೇಟಿ ಮಾಡಿದ್ದು, ನಾನು, ಮುಖ್ಯಮಂತ್ರಿ ಬಳಿ ಹೋಗುವುದಿಲ್ಲ. ಯಡಿಯೂರಪ್ಪನವರ ಸಿಎಂ ಸ್ಥಾನ ಬದಲಾವಣೆ ವಿಚಾರದಲ್ಲಿ, ನಮ್ಮದು ತಟಸ್ಥ ನಿಲುವು ಆಗಿದೆ. ಒಂದು ವೇಳೆ ಸಿಎಂ ಬದಲಾವಣೆ ಆದರೆ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಅವಕಾಶ ನೀಡಿ. ಮುಖ್ಯವಾಗಿ, ಕಳಂಕ ರಹಿತ ಮತ್ತು ರಾಜ್ಯವನ್ನ ಸಮರ್ಥವಾಗಿ ನಡೆಸುವ ಸಮರ್ಥ ವೀರಶೈವ ಲಿಂಗಾಯಿತ ಸಮುದಾಯಕ್ಕೆ ನೀಡುವಂತೆ ತಿಳಿಸಿದರು.