ಬೆಂಗಳೂರು, ಮೇ. 28: ಬಾಂಗ್ಲಾದೇಶ ಮೂಲದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಗೆ ಚಿತ್ರಹಿಂಸೆ ನೀಡುವ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಈ ಸಂಬಂಧ ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ರಾಮಮೂರ್ತಿನಗರದ ಎನ್ಆರ್ಐ ಬಡಾವಣೆಯಲ್ಲಿ ಕಳೆದ ಹತ್ತು ದಿನಗಳ ಹಿಂದೆ ಈ ಘಟನೆ ನಡೆದಿದೆ. ಈ ಸಂಬಂಧ ಯುವತಿ ಸೇರಿದಂತೆ ಐವರು ಬಾಂಗ್ಲಾ ಮೂಲದ ಪ್ರಜೆಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾ ಮೂಲದ ಸಾಗರ್, ಮೊಹಮದ್ ಬಾಬಾ ಶೇಕ್, ರಿದಾಯ್ ಬಾಬು ಬಾಂಗ್ಲಾ ಮೂಲದ ಆರೋಪಿಗಳು, ಹಕೀಲ್ ಹೈದರಾಬಾದ್ ಮೂಲದವನಾಗಿದ್ದು, ಅಕ್ರಮವಾಗಿ ಯುವತಿಯನ್ನು ಬಾಂಗ್ಲಾದಿಂದ ಕರೆತಂದ ಇಲ್ಲಿ ವೇಶ್ಯಾವಾಟಿಕೆ ದಂಧೆಗೆ ದೂಡಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನು ಅತ್ಯಾಚಾರ ಹಾಗೂ ಚಿತ್ರಹಿಂಸೆಗೆ ಒಳಗಾಗಿರುವ ಬಾಂಗ್ಲಾ ಮೂಲದ ಯುವತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇನ್ನು ಇಪ್ಪತ್ತೆರಡು ವರ್ಷ ವಯಸ್ಸಿನ ಯುವತಿಗೆ ಅತ್ಯಾಚಾರಕ್ಕೆ ಯತ್ನ ಹಾಗೂ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಕಾಮುಕರು ವಿಕೃತಿ ಮೆರೆದಿರುವ ವಿಡಿಯೋ ಇಡೀ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತಿದೆ. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಸಂತ್ರಸ್ತೆ ಮರ್ಮಾಂಗಕ್ಕೆ ಮದ್ಯದ ಬಾಟಲಿ ಇಟ್ಟು ವಿಕೃತಿ ಮೆರೆದಿದ್ದಾರೆ. ಘಟನಾ ಸ್ಥಳದಲ್ಲಿ ಇಬ್ಬರು ಯುವತಿಯರು ಹಾಗೂ ನಾಲ್ವರು ಯುವಕರು ಇರುವುದು ಬೆಳಕಿಗೆ ಬಂದಿದ್ದು ಪರಿಚಿತ ಯುವಕರೇ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆ.ಆರ್. ಪುರಂನ ಆವಲಹಳ್ಳಿ ಸಮೀಪವಿದ್ದ ಯುವತಿ ಸೇರಿ ಐವರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ಯುವತಿ ನಿಗೂಢವಾಗಿ ಕಣ್ಮರೆಯಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವಿಕೃತ ಕೃತ್ಯದಿಂದ ಯುವತಿ ಬದುಕಿದ್ದಾಳಾ ? ಇಲ್ಲವೇ ಇವರೇ ಹತ್ಯೆ ಮಾಡಿದರೇ ? ಅಥವಾ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಳೇ ಎಂಬ ಅನುಮಾನ ಶುರುವಾಗಿದೆ. ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಎರಡು ಪ್ರತ್ಯೇಕ ತಂಡ ರಚಿಸಿ ಸಂತ್ರಸ್ತ ಯುವತಿ ಪತ್ತೆಗೆ ಸೂಚನೆ ನೀಡಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್: ಬಾಂಗ್ಲಾ ಮೂಲದ ಯುವತಿ ಮೇಲೆ ಅತ್ಯಾಚಾರ ಎಸಗಿ ಲೈಂಗಿಕ ದೌರ್ಜನ್ಯ ಎಸಗುವ ವಿಡಿಯೋ ಈಶಾನ್ಯ ರಾಜ್ಯಗಳಲ್ಲಿ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತ ಅಸ್ಸಾಂ ಪೊಲೀಸರು ವಿಡಿಯೋ ಕುರಿತು ತನಿಖೆ ನಡೆಸಿದ್ದಾರೆ. ಅಲ್ಲದೇ ಬಾಂಗ್ಲಾ ಪೊಲೀಸರಿಗೂ ಮಾಹಿತಿಯನ್ನು ರವಾನಿಸಿದ್ದಾರೆ. ಆ ಬಳಿಕ ಬಾಂಗ್ಲಾ ಮೂಲದ ಸಂತ್ರಸ್ತೆ ಕುಟುಂಬವನ್ನು ಪತ್ತೆ ಮಾಡಲಾಗಿದೆ.
ಪೊಲೀಸ್ ಆಯುಕ್ತರ ಭೇಟಿ: ಬಾಂಗ್ಲಾ ದೇಶದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಕೂಡಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಆವಲಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ತ್ವರಿತವಾಗಿ ಪತ್ತೆ ಮಾಡುವಂತೆ ಸೂಚಿಸಿದ್ದಾರೆ. ಇಡೀ ಬೆಂಗಳೂರಿನ ಗೌರವಕ್ಕೆ ಕಳಂಕ ತಂದಿಟ್ಟಿರುವ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಪತ್ತೆ ಮಾಡಲು ಸೂಚನೆ ನೀಡಿದ್ದಾರೆ. ಸಂತ್ರಸ್ತ ಯುವತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.