ಅರಕಲಗೂಡು: ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಿರುವ ರೋಗಿಗಳ ಕುಟುಂಬಸ್ಥರಿಗೆ ಗ್ರಾಮಸ್ಥರು ಬೆದರಿಕೆ ಹಾಕಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.
ತಾಲೂಕಿನ ಎಚ್.ಆರ್.ಪಿ. ವಡ್ಡರಹಳ್ಳಿ ಗ್ರಾಮದ ವಿವಿಧ ಮನೆಯ ಐವರು ಪುರುಷರಿಗೆ ಕೋವಿಡ್ ಸೋಂಕು ದೃಢವಾಗಿದ್ದ ಹಿನ್ನೆಲೆ ಅವರೆಲ್ಲ ಕೋವಿಡ್ ಸೆಂಟರ್ಗೆ ದಾಖಲಾಗಿದ್ದರು. ಈ ವೇಳೆ, ಗ್ರಾಮದಲ್ಲಿ ರೋಗಿಯ ಕುಟುಂಬದಲ್ಲಿರುವ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದು, ಮನೆಯಿಂದ ಹೊರ ಬಾರದಂತೆ ತಾಕೀತು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ನಮಗೆ ಅಗತ್ಯ ವಸ್ತುಗಳ ಖರೀದಿಗೂ ಹೊರ ಹೋಗಲು ಆಗುತ್ತಿಲ್ಲ. ಸರ್ಕಾರದಿಂದಲೂ ನಮಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿಲ್ಲ ನಾವು ಊಟ ತಿಂಡಿಗೆ ಏನು ಮಾಡಬೇಕು? ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಣ್ಣೀರು ಹಾಕಿ ಅಳಲು ತೋಡಿಕೊಂಡಿದ್ದಾರೆ.
ದೂರು ಕೊಡಲು ಅರಕಲಗೂಡು ಠಾಣೆಗೆ ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ, ನೀವು ಕುಳಿತುಕೊಂಡು ರಾಜಿ ಮಾಡಿಕೊಳ್ಳಿ ಎಂದು ಹಿಂತಿರುಗಿ ಕಳುಹಿಸಿದ್ದಾರೆ. ನಮಗೆ ರಕ್ಷಣೆ ನೀಡದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.