ಸಲ್ಮಾನ್ ಖಾನ್ ನಟನೆಯ ರಾಧೇ ಸಿನಿಮಾ ಇತ್ತೀಚಿಗಷ್ಟೆ ತೆರೆಕಂಡಿತ್ತು. ಲಾಕ್ಡೌನ್ ಕಾರಣದಿಂದ ಚಿತ್ರಮಂದಿರಗಳು ತೆರೆದಿಲ್ಲ. ಹಾಗಾಗಿ, ಒಟಿಟಿಯಲ್ಲಿ ರಾಧೇ ಸಿನಿಮಾ ಬಿಡುಗಡೆಯಾಗಿತ್ತು. ರಿಲೀಸ್ ಆದ ದಿನವೇ ರಾಧೇ ಚಿತ್ರಕ್ಕೆ ಪೈರಸಿ ಕಾಟ ಎದುರಾಯಿತು.
ರಾಧೇ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದು ಕಡೆಯಾದರೆ, ಸಿನಿಮಾ ಪೈರಸಿಯಾಗಿದ್ದು ಸಹಜವಾಗಿ ತಯಾರಕರಿಗೆ ತಲೆಬಿಸಿ ಹೆಚ್ಚಿಸಿತು. ಹಾಗಾಗಿ, ಪೈರಸಿ ಹರಡಿಸುವವರ ವಿರುದ್ಧ ನಿರ್ಮಾಪಕರು ಹೈ ಕೋರ್ಟ್ ಮೊರೆ ಹೋದರು.
ಈ ಅರ್ಜಿ ವಿಚಾರಣೆ ಮಾಡಿದ ದೆಹಲಿ ಹೈ ಕೋರ್ಟ್ ವಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ”ರಾಧೇ ಸಿನಿಮಾದ ಪೈರಸಿ ಕಾಪಿ ಹರಡಿಸಿದರೆ ವಾಟ್ಸಾಪ್ ಸೇವೆ ಸ್ಥಗಿತಗೊಳಿಸಲಾಗುವುದು” ಎಂದು ಸೂಚಿಸಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ರಾಧೇ ಚಿತ್ರದ ಪೈರಸಿ ಕಾಪಿಯನ್ನು ಹರಡಿಸಲಾಗುತ್ತದೆ. ಇದರಿಂದ ನಮಗೆ ತೊಂದರೆಯಾಗಿದೆ ಎಂದು ಜೀ ಸಂಸ್ಥೆ ಕೋರ್ಟ್ನಲ್ಲಿ ದೂರು ದಾಖಲಿಸಿತ್ತು. ವಿಚಾರಣೆ ಬಳಿಕ ವಾಟ್ಸಾಪ್ ಸಂಸ್ಥೆಗೆ ಪೈರಸಿ ಹರಡಿಸಿದವರ ವಾಟ್ಸಾಪ್ ಸೇವೆ ರದ್ದುಗೊಳಿಸಿ ಎಂದು ಆದೇಶಿಸಿದೆ.
ವರದಿಗಳ ಪ್ರಕಾರ, ದೇಶದ ಪ್ರಮುಖ ಟೆಲಿಕಾಂ ಆಪರೇಟರ್ಗಳು ಮತ್ತು ಇಂಟರ್ನೆಟ್ ಪೂರೈಕೆದಾರರಾದ ಏರ್ಟೆಲ್, ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳು ಪೈರಸಿಗೆ ಬೆಂಬಲಿಸುವ ಚಂದಾದಾರರ ವಿವರಗಳನ್ನು ಬಹಿರಂಗಪಡಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.