ಕಾರಟಗಿ: ‘ಕ್ಷೇತ್ರದಲ್ಲಿ ಕೊರೊನಾ ಸೋಂಕಿತರು ಸೇರಿದಂತೆ ವಿವಿಧ ರೋಗಿಗಳಿಗೆ ತುರ್ತು ಆರೋಗ್ಯ ಸೇವೆ ಸಮರ್ಪಕವಾಗಿ ದೊರೆಯಲಿ ಎನ್ನುವ ಉದ್ದೇಶದಿಂದ ವೈಯಕ್ತಿಕ ವೆಚ್ಚದಲ್ಲಿ 2 ಆಮ್ಲಜನಕ ಸಹಿತ ಆಂಬುಲೆನ್ಸ್ಗಳ ವ್ಯವಸ್ಥೆ ಮಾಡಲಾಗಿದೆ. ಜನರು ಅಗತ್ಯ ಸಂದರ್ಭದಲ್ಲಿ ಪ್ರಯೋಜನಾ ಪಡೆಯಬಹುದು’ ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು.
ಭಾನುವಾರ ತಮ್ಮ ಕಚೇರಿ ಬಳಿ ಆಂಬುಲೆನ್ಸ್ ಹಸ್ತಾಂತರಿಸಿ ಬಳಿಕ ಸುದ್ದಿಗಾರರೊಂದಿಗೆ
ಮಾತನಾಡಿದರು.
ಕ್ಷೇತ್ರದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿ. ಗ್ರಾಮೀಣ ಪ್ರದೇಶದ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಸಕಾಲಕ್ಕೆ ತುರ್ತು ಸೇವೆ ಒದಗಿಸಲು ಕನಕಗಿರಿ ಹಾಗೂ ಕಾರಟಗಿ ತಾಲ್ಲೂಕಿಗೆ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ರೋಗಿಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಗಂಗಾವತಿ, ಕೊಪ್ಪಳಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು ಎಂದರು.
ಕೋವಿಡ್ ಎರಡನೇ ಅಲೆ ಸೋಂಕು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಸೂಕ್ತ ಚಿಕಿತ್ಸೆಗೆ ಶ್ರೀರಾಮನಗರದಲ್ಲಿ ಆಮ್ಲಜನಕ ಹೊಂದಿರುವ 30 ಬೆಡ್ಗಳ ವ್ಯವಸ್ಥೆಯ ಕೇಂದ್ರ ಆರಂಭಿಸಲಾಗಿದೆ. ಕೊಪ್ಪಳದ ಗವಿಮಠದಲ್ಲೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರದಲ್ಲೇ ಕನಕಗಿರಿಯಲ್ಲೂ ಆಮ್ಲಜನಕಯುಕ್ತ ಬೆಡ್ ವ್ಯವಸ್ಥೆಯ ಆಸ್ಪತ್ರೆ ಆರಂಭಿಸಲಾಗುವುದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಟಿಕಾರೆ ಮಾತನಾಡಿ,’ಶಾಸಕರ ಸೇವೆ ಶ್ಲಾಘನೀಯ’ ಎಂದರು.
ಪುರಸಭೆ ಸದಸ್ಯ ಜಿ. ತಿಮ್ಮನಗೌಡ, ಎಪಿಎಂಸಿ ಜಿ. ರಾಮಮೋಹನರಾವ್, ವಿಶೇಷ ಎಪಿಎಂಸಿ ಸದಸ್ಯ ಗಂಗಾಧರ ಕೊಮಾರಪ್ಪ, ಪ್ರಮುಖರಾದ ವೀರೇಶ ಸಾಲೋಣಿ, ಅಮರೇಶ ಕುಳಗಿ, ಶಿವಶರಣೆಗೌಡ ಯರಡೋಣ, ಮೆಹಬೂಬ ಸಿದ್ದಾಪುರ, ಮಂಜುನಾಥ ಮಸ್ಕಿ, ಬಸವರಾಜ ಅಂಗಡಿ, ಮಂಜುನಾಥ ಗುಂಜಳ್ಳಿ, ತಹಶೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ, ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹಾಗೂ ಸಬ್ ಇನ್ಸ್ಪೆಕ್ಟರ್ ಲಕ್ಕಪ್ಪ ಬಿ. ಅಗ್ನಿ ಉಪಸ್ಥಿತರಿದ್ದರು.