ವಿಜಯನಗರ, ಮೇ 23; ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ತಗುಲಿದ ವ್ಯಕ್ತಿಗಳು ಮನೆಯ ಆರೈಕೆಯಲ್ಲಿ ಚಿಕಿತ್ಸೆ ಪಡೆಯುವಂತಿಲ್ಲ. ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಬೇಕು ಎಂದು ಸರ್ಕಾರ ಹೇಳಿದೆ. ಆದರೆ ಜನರು ಇದಕ್ಕೆ ಒಪ್ಪುತ್ತಿಲ್ಲ.
ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ವರ್ಗಾಯಿಸಲು ಅಧಿಕಾರಿಗಳು ವಾಹನ ಸಮೇತ ಆಗಮಿಸಿದಾಗ ಅವರ ಜೊತೆ ಜನರು ವಾಗ್ವಾದ ಮಾಡಿ ವಾಪಸ್ ಕಳಿಸಿದ ಘಟನೆ ಶನಿವಾರ ವಿಜಯನಗರದಲ್ಲಿ ನಡೆದಿದೆ.
ಸಿರುಗುಪ್ಪ ತಾಲೂಕಿನ ಹಚ್ಚೋಳ್ಳಿ ಗ್ರಾಮದಲ್ಲಿ 4 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ತಾಲೂಕು ಟಾಸ್ಕ್ ಫೋರ್ಸ್ ಸಮಿತಿಗೆ ಬಂದ ಆದೇಶದಂತೆ ಅವರನ್ನು ಹೋಂ ಐಸೋಲೇಷನ್ನಿಂದ ಕೋವಿಡ್ ಕೇರ್ ಸೆಂಟರ್ಗೆ ವರ್ಗಾಯಿಸಬೇಕಿತ್ತು.
ಇದಕ್ಕಾಗಿ ಅಧಿಕಾರಿಗಳು ಅಂಬುಲೆನ್ಸ್ ಸಮೇತ ಆಗಮಿಸಿದ್ದರು. ಜೊತೆಗೆ ಪೊಲೀಸ್ ಅಧಿಕಾರಿಗಳು ಸಹ ಇದ್ದರು. ರಾವಿಹಾಳು ಗ್ರಾಮದಲ್ಲಿ ಸಿದ್ಧಪಡಿಸಿರುವ ಕೋವಿಡ್ ಕೇರ್ ಸೆಂಟರ್ಗೆ ಆಗಮಿಸುವಂತೆ ಜನರ ಮನವೊಲಿಕೆಗೆ ಪ್ರಯತ್ನಿಸಲಾಯಿತು.
ಜನರು ಅಧಿಕಾರಿಗಳ ಮಾತಿಗೆ ಸ್ವಲ್ಪವೂ ಮನ್ನಣೆ ಕೊಡಲಿಲ್ಲ. ಬದಲಾಗಿ ಅಲ್ಲಿಗೆ ಕರೆದುಕೊಂಡು ಹೋದಾಗ ನಮ್ಮವರಿಗೆ ಏನಾದರೂ ಆದರೆ ನೀವು ಜವಾಬ್ದಾರಿ ಆಗುತ್ತೀರಾ?. ನೀವು ನಮಗೆ ಗ್ಯಾರಂಟಿ ಬರೆದು ಕೊಡಿ ಎಂದು ಜನರು ವಾಗ್ವಾದ ಮಾಡಿದರು. ಕೋವಿಡ್ ಕೇರ್ ಸೆಂಟರ್ಗೆ ಬರಲು ಸಾಧ್ಯವಿಲ್ಲ ಎಂದರು.
ಆರೋಗ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಪರಿ-ಪರಿಯಾಗಿ ತಿಳಿಸಿದರೂ ಯಾರೂ ಅಂಬುಲೆನ್ಸ್ ಹತ್ತಲೇ ಇಲ್ಲ. ಕೊನೆಗೆ ಸೋಂಕಿತರೇ ನಮ್ಮ ಆರೋಗ್ಯಕ್ಕೆ ಮತ್ತು ನಮಗೆ ನಾವೇ ಜವಾಬ್ದಾರಿಯಾಗಿರುತ್ತೇವೆ. ಸರ್ಕಾರದ ಕೇರ್ ಸೆಂಟರ್ಗೆ ಬರುವುದಿಲ್ಲ ಎಂದು ಬರೆದು ಕೊಟ್ಟು ಅಧಿಕಾರಿಗಳನ್ನು ವಾಪಸ್ ಕಳಿಸಿದರು.