ಚಿತ್ರದುರ್ಗ: ಕೋವಿಡ್ ಮೊದಲ ಅಲೆಯ ವೇಳೆ ಬಡತನ ರೇಖೆಗಿಂತ ಕಡಿಮೆ ಇರುವ ಜನರನ್ನು ಕಳೆದ ವರ್ಷ ಗುರುತಿಸಿ ಮುರುಘಾಮಠದಿಂದ ಆಹಾರ ಕಿಟ್ ವಿತರಿಸಲಾಗಿತ್ತು. ಎರಡನೇ ಅಲೆಯಲ್ಲೂ ಇದೇ ಮಾದರಿ ಅನುಸರಿಸಿದ್ದು, ಶನಿವಾರದಿಂದ ಈ ಕಾರ್ಯ ಆರಂಭವಾಗಿದೆ.
ವಿವಿಧ ಸಮುದಾಯಗಳನ್ನು ಗುರುತಿಸಿರುವ ಶ್ರೀಮಠ ಸವಿತಾ ಸಮುದಾಯದ 100 ಬಡವರಿಗೆ ಅಕ್ಕಿ, ಬೇಳೆ ಹಾಗೂ ಗೋಧಿ ಹಿಟ್ಟು ಹೊಂದಿರುವ ‘ಆಹಾರ ಸಾಮಗ್ರಿ ಕಿಟ್’ಗಳನ್ನು ವಿತರಿಸಿತು. ಶಿವಮೂರ್ತಿ ಮುರುಘಾ ಶರಣರು ಇದಕ್ಕೆ ಚಾಲನೆ ನೀಡಿದರು.
ಶರಣರು ಮಾತನಾಡಿ, ‘ಕೋವಿಡ್ ಕಾರಣಕ್ಕೆ ಲಾಕ್ಡೌನ್ ಜಾರಿಯಲ್ಲಿದೆ. ಈ ವೇಳೆ ದುಡಿಮೆ ಇಲ್ಲದೆ ಅನೇಕರು ಕಂಗಾಲಾಗಿದ್ದಾರೆ. ಇಂಥವರಿಗೆ ನೆರವು ನೀಡುವ ಅಗತ್ಯವಿದೆ. ಅದಕ್ಕಾಗಿ ಸಂಕಷ್ಟದಲ್ಲಿ ಇರುವ ನಿರ್ಗತಿಕರಿಗೆ, ವಿವಿಧ ಸಮುದಾಯದ ಬಡವರಿಗೆ ಆಹಾರದ ಕಿಟ್ ನೀಡಲಾಗುತ್ತಿದೆ’ ಎಂದರು.
‘ನಿತ್ಯವೂ 100 ಜನರನ್ನು ಗುರುತಿಸಿ ಆಹಾರ ಕಿಟ್ ವಿತರಿಸಲಾಗುವುದು. ಅರ್ಹರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಷ್ಟದಲ್ಲಿ ಇರುವವರಿಗೆ ಸ್ಪಂದಿಸುವುದಕ್ಕಾಗಿ ಪ್ರಸಕ್ತ ವರ್ಷವೂ ಈ ಕಾರ್ಯ ಮುಂದುವರಿಸಲಾಗಿದೆ’ ಎಂದು ಹೇಳಿದರು.
ಕೋವಿಡ್ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಸಾರ್ವಜನಿಕರು ಅನಗತ್ಯವಾಗಿ ಸಂಚರಿಸಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಅಂತರ ಕಾಯ್ದುಕೊಳ್ಳಬೇಕು. ಇದರಿಂದ ಕುಟುಂಬಕ್ಕೂ ಹಾಗೂ ಸಮಾಜಕ್ಕೂ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಆಡಳಿತ ಮಂಡಳಿ ಸದಸ್ಯ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಸವಿತಾ ಸಮುದಾಯದ ಅಧ್ಯಕ್ಷ ಶ್ರೀನಿವಾಸ್, ಹಾಲಪ್ಪನಾಯಕ, ಬಸವರಾಜ ಗಡ್ಡೆಪ್ಪನವರ
ಇದ್ದರು.