ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೆಮ್ಮಾರಿ ವೈರಸ್ಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಇದರ ನಡುವೆಯೇ ಅದೃಷ್ಟಶಾಲಿಗಳೆಂಬಂತೆ ವೈರಸ್ ವಿರುದ್ಧ ಹೋರಾಡಿ ಒಂದೇ ಕುಟುಂಬದ 16 ಜನರು ಗುಣಮುಖರಾಗುವ ಮೂಲಕ ಇತರಿಗೂ ಮಾದರಿಯಾಗಿದ್ದಾರೆ.
ಸುಳ್ಳ ಗ್ರಾಮದ ಶಿವಳ್ಳಿ ಮಠ ಕುಟುಂಬದ 16 ಜನಕ್ಕೆ ಕೊರೊನಾ ಸೋಂಕು ತಗುಲಿತ್ತು. ಮೇ 3 ರಿಂದ ಎಲ್ಲರೂ ಹೋಮ್ ಐಸೋಲೇಷನ್ನಲ್ಲಿ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಲ್ಲಿ ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. 45 ವರ್ಷ ಮೇಲ್ಪಟ್ಟ 4 ಜನರು ಈ ಮೊದಲೇ ಎರಡನೇ ಡೋಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರು ಹಾಗೂ ಇತರ 3 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.
ಕಳೆದ ತಿಂಗಳು 29 ರಂದು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೇ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿದೆವು ಎಂದು ಮನೆಯ ಮುಖ್ಯಸ್ಥ ಮಲ್ಲಯ್ಯ ಶಿವಳ್ಳಿಮಠ ತಿಳಿಸಿದ್ದಾರೆ.
ರಾಜು(34), ಶ್ರೇಯಾ (10ತಿಂಗಳು), ಲಕ್ಷ್ಮಿ(25), ವೈಭವಿ(1), ಶಶಿಕಲಾ(24), ಸಮರ್ಥ (2), ಸಹನಾ(16),ವೈಷ್ಣವಿ(2),ಗಿರಿಜಮ್ಮ(60),ಶರಣಯ್ಯಾ(9), ಮಲ್ಲಯ್ಯ (63),ಮಹಾಂತಯ್ಯ(60), ಸಿದ್ದರಾಮಯ್ಯ(59) ಮಲ್ಲಿಕಾರ್ಜುನ (25), ಮಲ್ಲಿಕಾರ್ಜುನಯ್ಯಾ(28), ಮೃತ್ಯುಂಜಯ(27) ಕೊರೊನಾವನ್ನು ಗೆದ್ದಿದ್ದಾರೆ.