ಚಾಮರಾಜನಗರ: ಇಲ್ಲಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಮೊಳೆಯೂರು ವಲಯದ ಮೀನಕಟ್ಟೆಯ ಅರಣ್ಯದಲ್ಲಿ ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಣ್ಣಾನೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೆರೆಯಲ್ಲಿ ಕೆಸರು ಉಂಟಾಗಿತ್ತು. ಕೆರೆಗೆ ನೀರು ಕುಡಿಯು ಬಂದಿದ್ದ ಕಾಡಾನೆಯೊಂದು ಕೆಸರಿನಲ್ಲಿ ಸಿಲುಕಿ ಮೇಲೇಳಲಾಗದೇ ಗಂಟೆಗಟ್ಟಲೆ ಕಷ್ಟ ಪಡುತಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜೆಸಿಬಿ ಯೊಂದಿಗೆ ತೆರಳಿ ಆನೆಗೆ ತೊಂದರೆ ಆಗದಂತೆ ಮೇಲೆತ್ತುವಲ್ಲಿ ಯಶಶ್ವಿ ಆದರು.
ಈ ಕುರಿತ ವಿಡಿಯೊವನ್ನು ಬಂಡೀಪುರ ಹುಲಿ ರಕ್ಷಿತಾರಣ್ಯದ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೇವಲ 4 ಗಂಟೆ ಅವಧಿಯಲ್ಲಿ 9 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ, ಪ್ರತಿಕ್ರಿಯಿಸಿ ಈ ‘ಘಟನೆ ಶನಿವಾರ ಮಧ್ಯಾಹ್ನ 1 ಗಂಟೆಯಲ್ಲಿ ನಡೆದಿದೆ. ಕೆಸರಿನಲ್ಲಿ ತನ್ನ ಮರಿಯೊಂದಿಗೆ ಆಟವಾಡುತ್ತಿದ್ದ ಹೆಣ್ಣಾನೆಯು ಸಿಲುಕಿದೆ. ಮರಿಯು ದಡದಲ್ಲಿ ನಿಂತು ವೀಕ್ಷಿಸುತ್ತಿತ್ತು.
ಆನೆಗೆ ಎದ್ದು ನಿಲ್ಲುವುದಕ್ಕೆ ಒಂದಿಷ್ಟು ಸಹಾಯ ಬೇಕಿತ್ತು. ಅದಕ್ಕಾಗಿ ಜೆಸಿಬಿ ಸಹಾಯದಿಂದ ಮೇಲೆತ್ತಲಾಯಿತು. ನಂತರ, ಆನೆಯು ತನ್ನ ಮರಿಯೊಂದಿಗೆ ಸುರಕ್ಷಿತವಾಗಿ ಕಾಡಿನೊಳಗೆ ಹೋಯಿತು’ ಎಂದು ತಿಳಿಸಿದರು. ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಈ ರಕ್ಷಣಾ ಕಾರ್ಯ ನಡೆದಿದೆ.
Laxmi News 24×7