ಬೆಂಗಳೂರು, ಮೇ 11- ಲಾಕ್ ಡೌನ್ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ರೈತರು ಹಾಗೂ ಬಡ ವರ್ಗದವರ ನೆರವಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಕೇಜ್ ಕೊಡಲು ನಾವು ನೋಟು ಮುದ್ರಿಸುವ ಯಂತ್ರ ಇಟ್ಟಿಲ್ಲ ಎಂದು ಕೆಲ ಸಚಿವರು ಹೇಳಿದ್ದಾರೆ. ಸರ್ಕಾರಕ್ಕೆ ಪ್ಯಾಕೇಜ್ ಕೊಡಲಾಗದಿದ್ದರೆ ಆಗಲ್ಲ ಎಂದು ಹೇಳಲಿ ಅದನ್ನು ಬಿಟ್ಟು ಉದ್ಧಟತನದ ಮಾತುಗಳನ್ನು ಆಡಬಾರದು. ಈ ಹಿಂದೆ ಸಾಲ ಮನ್ನಾ ಮಾಡಿ ಎಂದು ಕೇಳಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ನೋಟು ಮುದ್ರಣದ ಮಿಷನ್ ಇಟ್ಟಿಲ್ಲ ಎಂದು ಹೇಳಿದ್ದರು. ಈಗ ಸಚಿವರು ಅದೇ ದಾಟಿಯಲ್ಲಿ ಮಾತನಾಡುತ್ತಿದ್ದಾರೆ.
ನೋಟು ಮುದ್ರಣದ ಮಿಷನ್ ಇಲ್ಲದೆ ಇರಬಹುದು, ನೋಟು ಎಣಿಸುವ ಯಂತ್ರವನ್ನಂತು ಇಟ್ಟಿದ್ದರಲ್ಲ. ಸರ್ಕಾರ ಲಾಕ್ ಡೌನ್ ಮಾಡಿರುವುದಕ್ಕೆ ಅಲ್ಲವೇ ಜನ ಸಾಮಾನ್ಯರು ಆರ್ಥಿಕ ನೆರವು ಕೇಳುತ್ತಿರುವುದು. ಇಲ್ಲವಾದರೆ ಯಾರು ಕೇಳುತ್ತಿದ್ದರು ಎಂದು ಹೇಳಿದರು.
ತಮಿಳುನಾಡಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 4 ಸಾವಿರ ರೂ. ಹಾಕತ್ತಿದ್ದಾರೆ. ಕರ್ನಾಟಕದಲ್ಲಿ ಯಾವ ಪ್ಯಾಕೇಜು ಇಲ್ಲ. ಅದರಿಂದ ಕಾರ್ಮಿಕರು ಕೆಲಸ ಸಿಗದೆ ಜೀವನ ನಡೆಸಲಾಗದೆ ವಲಸೆ ಹೋಗುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು, ಕೂಡಲೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಕೃಷಿ ಉತ್ಪನ್ನಗಳನ್ನು ಎಲ್ಲಿಯೂ ಖರೀದಿಸುತ್ತಿಲ್ಲ. ಹಣ್ಣು, ತರಕಾರಿ, ಹೂ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ, ತೋಟಗಾರಿಕೆ ಹಾಗೂ ಸಹಕಾರ ಸಚಿವರು ಏನು ಮಾಡುತ್ತಿದ್ದಾರೆ. ಸಹಕಾರ ಸಚಿವರು ಒಂದೆರಡು ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದನ್ನು ನೋಡಿದ್ದೇನೆ. ಅವರು ಮೊದಲು ಎಪಿಎಂಸಿಗಳಿಗೆ ಹೋಗಲಿ, ಅಲ್ಲಿ ಕೃಷಿ ಉತ್ಪನ್ನಗಳ ಬೆಲೆ ಏನಿದೆ ಎಂದು ತಿಳಿದುಕೊಂಡು ಜನರಿಗೆ ತಿಳಿಸಲಿ. ಕೃಷಿ ರೈತರ ಬಳಿ ಹೋಗಿ ಮಾತನಾಡಲಿ, ಈ ಮೊದಲು ಎಷ್ಟು ಬೆಲೆ ಇತ್ತು, ಈಗ ಎಷ್ಟಿದೆ ? ಎಷ್ಟು ನಷ್ಟವಾಗುತ್ತಿದೆ ಎಂಬ ಮಾಹಿತಿ ಪಡೆದಕೊಡು ನಷ್ಟವಾಗುತ್ತಿರುವುದನ್ನು ಯಾವ ರೀತಿ ತುಂಬಿಕೊಡಬಹುದು ಎಂಬುದನ್ನು ಯೋಚಿಸಲು. ಅದನ್ನು ಬಿಟ್ಟು ಕೇವಲ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದರೆ ಪ್ರಯೋಜನವಾಗುವುದಿಲ್ಲಎಂದು ಹೇಳಿದರು.
ಕೋವಿಡ್ ನ ಮೂರನೆ ಅಲೆಗೆ ತಯಾರು ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅದಕ್ಕು ಮೊದಲು ಈಗ ಎರಡನೇ ಅಲೆಯಿಂದ ಜನರನ್ನು ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು ನಾನು ನನ್ನ ಮನೆಯಿಂದಲೇ ಪ್ರಯತ್ನ ಮಾಡಿದೆ. ನನ್ನ ಮಕ್ಕಳಿಗೆ ಲಸಿಕೆ ಕೊಡಿಸಲು ಹಲವು ಆಸ್ಪತ್ರೆಗಳಲ್ಲಿ ನೋಂದಣಿ ಮಾಡಿಸಲು ಪ್ರತ್ನಿಸಿದರು ಪ್ರಯೋಜನವಾಗಿಲ್ಲ. ಯಾರು ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲೆ ಎಂದು ಹೇಳಿದರು.
ಸರ್ಕಾರಕ್ಕೆ ಯಾವ ವಿಷಯದಲ್ಲೂ ಸ್ಪಷ್ಟತೆ ಇಲ್ಲ. ಸಿಇಟಿ ಸೀಟು ಹಂಚಿಕೆ ಸಂಬಂಧ ಪಟ್ಟಂತೆ ರಾಜ್ಯದಲ್ಲಿ ಬಳಸುತ್ತಿರುವ ಸಾಫ್ಟವೇರ್ ತುಂಬಾ ಸ್ಪಷ್ಟವಾಗಿದೆ. ಎಲ್ಲಿ ಯಾವ ಕಾಲೇಜಿನಲ್ಲಿ ಎಷ್ಟು ಸೀಟು ಲಭ್ಯ ಇವೆ ಎಂಬ ಮಾಹಿತ ಸಂಪೂರ್ಣವಾಗಿ ಲಭ್ಯವಾಗುತ್ತದೆ. ಅದೇ ಮಾದರಿಯ ಸಾಫ್ಟವೇರ್ ಅನ್ನು ರಾಜ್ಯ ಸರ್ಕಾರ ಆಸ್ಪತ್ರೆಗಳಲ್ಲಿ ಬೆಡ್ ಹಂಚಿಕೆ, ಆಕ್ಸಿಜನ್ ಮತ್ತು ಚಿಕಿತ್ಸಾ ಔಷಧಿಗಳ ಮಾಹಿತಿಗೆ ಬಳಕೆ ಮಾಡಿಕೊಳ್ಳಿ. ಆ ಸಾಫ್ಟವೇರ್ ನಲ್ಲಿ ಎಲ್ಲೆಲ್ಲಿ ಎಷ್ಟು ಹಾಸಿಗೆಗಳಿವೆ, ಆಕ್ಸಿಜನ್ ಎಷ್ಟು ಲಭ್ಯ ಇದೆ. ರೆಮ್ ಡಿಸಿವಿರ್ ಸೇರಿದಂತೆ ಇತರ ಔಷಧಿಗಳು ಎಷ್ಟಿವೆ ಎಂಬ ಮಾಹಿತಿಯನ್ನುಅಳವಡಿಸಿ ಪಾರದರ್ಶಕತೆ ಕಾಯ್ದುಕೊಳ್ಳಲಿ ಎಂದು ಅವರು ಒತ್ತಾಯಿಸಿದರು.
ಸಂಸದ ತೇಜಸ್ವಿ ಸೂರ್ಯ ಈ ರಾಜ್ಯದ ಕೋಮು ವಿಷ ಬೀಜ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು. ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಆತ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ್ದನ್ನು ನೋಡಿದ್ದೇನೆ. ಆತನ ಬಗ್ಗೆ ಏನೆಂದು ಕರೆಯಲಿ, ಈ ಮೊದಲು ಪಂಚರ್ ಹಾಕುವವರು ಎಂದು ಅಲ್ಪಸಂಖ್ಯಾತರನ್ನು ಜರಿದಿದ್ದ, ಕೋವಿಡ್ ವಾರ್ ರೂಂನನ್ನು ಮದರಸಾ ಎಂದು ಕರೆದಿದ್ದು, ಬೆಂಗಳೂರನ್ನು ಟೆರರಿಸ್ಟ್ ಎಂದು ಆರೋಪಿಸಿದ್ದು, ಇದೇ ತೇಜಸ್ವಿ ಸೂರ್ಯ ಅಲ್ಲವೇ ಎಂದು ಕಿಡಿಕಾರಿದರು.
ವಾರ್ ರೂಂನಲ್ಲಿ ಕೆಲಸ ಮಾಡುವ 17 ಮಂದಿಯ ಹೆಸರನ್ನು ಅಧಿಕಾರಿಗಳು ನೀಡಿದ್ದರು ಎಂದು ತೇಜಸ್ವಿ ಹೇಳಿದ್ದಾರೆ. ಅಧಿಕಾರಿಗಳು ಎಲ್ಲರ ಪಟ್ಟಿಯನ್ನೂ ನೀಡುತ್ತಾರೆ, ಕೇವಲ 17 ಮಂದಿಯ ಹೆಸರನ್ನು ಮಾತ್ರ ಯಾಕೆ ಹೇಳುತ್ತಾರೆ. ಸುಮ್ಮನೇ ಅಧಿಕಾರಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.