ಬೆಂಗಳೂರು, ಮೇ 11- ರಾಜ್ಯ ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರು ಕೊರೊನಾ ಚಿಕಿತ್ಸೆ ಹಾಗೂ ಅದರ ನಿರ್ವಹಣೆಗೆ ಬಳಕೆಯಾಗುವ ಸಾಮಗ್ರಿಗಳ ದರ ಮಾರುಕಟ್ಟೆಯಲ್ಲೇ ದುಬಾರಿಯಾಗಿದ್ದು, ಜನ ಸಾಮಾನ್ಯರು ಪರಿತಪಿಸುವಂತಾಗಿದೆ. ವೈದ್ಯಕೀಯ ಕ್ಷೇತ್ರದ ವ್ಯಾಪಾರ ವಹಿವಾಟುಗಳಿ ಹಿಂದೆಂದಿಗಿಂತಲೂ ನಲವತ್ತು ಪಟ್ಟು ಹೆಚ್ಚಾಗಿದೆ. ಜೊತೆಯಲ್ಲಿ ಲಾಭಕೋರತನ ದುಪ್ಪಟ್ಟಾಗಿದೆ.
ಆಕ್ಸಿಜನ್ ಮತ್ತು ಅದನ್ನು ತುಂಬುವ ಸಿಲಿಂಡರ್ ಗಳು, ಪಿಪಿಇ ಕಿಟ್, ಪಲ್ಸಾಸ್ಕೋಮೀಟರ್, ಬಿಪಿ ಆಪರೆಟರ್, ಮಧುಮೇಹ ಪರೀಕ್ಷಿರುವ ಕಿರು ಯಂತ್ರ, ರೆಮ್ ಡಿಸಿವಿರ್ ಹಾಗೂ ಇತರ ಔಷಧಿಗಳ ಬೆಲೆ ದುಬಾರಿಯಾಗಿದೆ. ಜೊತೆಗ ಸಿ ವಿಟಮಿನ್ ಮತ್ತು ರಕ್ತವನ್ನು ತಿಳಿಗೊಳಿಸುವ ಔಷಧಗಳ ಬೆಲೆ ಕೂಡ ದುಪ್ಪಟ್ಟು ಹೆಚ್ಚಾಗಿದೆ.
ಪಲ್ಸಾಸ್ಕೋಮಿಟರ್ ಬೆಲೆ ಈ ಮೊದಲು 350 ರೂಪಾಯಿಗಳಿತ್ತು, ಅದರ ಬೆಲೆ ಏಕಾಏಕಿ 2 ಸಾವಿರ ರೂಪಾಯಿ ದಾಟಿದೆ. ಪಿಪಿಇ ಕಿಟ್ ಕೂಡಾ ದುಬಾರಿಯಾಗಿದೆ. ಕೆಲ ವಸ್ತುಗಳು ಆನ್ ಲೈನ್ ಮಾರುಕಟ್ಟೆಯಲ್ಲೂ ಲಭ್ಯವಿದ್ದು, ಅವುಗಳ ಬೆಲೆ ಕೂಡ ಹೆಚ್ಚಾಗಿದೆ. ರಾಜ್ಯ ಸರ್ಕಾರ ಎಂ ಆರ್ ಪಿಗಿಂತ ಹೆಚ್ಚಿನ ಬೆಲೆಗೆ ಯಾವುದೇ ವಸ್ತು ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಹೇಳುತ್ತಲೇ ಬಂದಿದೆ.
ಸರ್ಕಾರ ಚಾಪೆ ಕೆಳಗೆ ತೂರಿದರೆ ವ್ಯಾಪಾರಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಕಂಪೆನಿ ಮುದ್ರಿಸಿರುವ ಎಂ ಆರ್ ಪಿ ದರದ ಮೇಲೆ ಹೊಸದಾಗಿ ಸ್ಟಿಕರ್ ಅಂಟಿಸಿ ಅದರಲ್ಲಿ ಹೊಸ ದರವನ್ನು ಮುದ್ರಿಸುತ್ತಿದ್ದಾರೆ.
ಹೊಸದಾಗಿ ಅಂಟಿಸಲಾಗುವ ಎಂ ಆರ್ ಪಿ ಸ್ಟಿಕರ್ ನಲ್ಲಿ ಹಳೆದ ದರಕ್ಕಿಂತ ಐದಾರು ಪಟ್ಟು ಹೆಚ್ಚು ದರ ನಿಗದಿ ಮಾಡಲಾಗಿರುತ್ತದೆ. ಗ್ರಾಹಕರು ಪ್ರಶ್ನಿಸಿದರೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಎಲ್ಲಿಯೂ ವಸ್ತುಗಳು ಸಿಗುತ್ತಿಲ್ಲ. ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಬಿಡಿ ಎಂಬ ಉಡಾಫೆ ಉತ್ತರ ಸಿಗುತ್ತಿದೆ.
ಪ್ರಸ್ತುತ ಸಂದರ್ಭದಲ್ಲಿ ಪಲ್ಸಾಸ್ಕೋಮಿಟರ್, ಬಿಪಿ ಆಪರೇಟರ್, ಸುಗರ್ ಚೆಕ್ ಮಿಷನ್ ಗಳು ಅನಿವಾರ್ಯವಾಗುತ್ತಿವೆ. ಅವುಗಳ ಖರೀದಿ ಭರಾಟೆ ಜೋರಾಗಿದೆ. ಈ ಪರಿಸ್ಥಿತಿಯ ಲಾಭ ಪಡೆದ ವ್ಯಾಪಾರಿಗಳು ಹಗಲು ದರೋಡೆಗೆ ಇಳಿಸಿದ್ದಾರೆ.
ರಾಜ್ಯ ಸರ್ಕಾರದ ಎಚ್ಚರಿಕೆ ನಗೆ ಪಾಟಲಿಗೀಡಾಗಿದೆ. ಸರ್ಕಾರದ ಎಚ್ಚರಿಕೆಗೆ ಯಾವ ವ್ಯಾಪಾರಿಗಳು ಕ್ಯಾರೆ ಎನ್ನುತ್ತಿಲ್ಲ. ಸರ್ಕಾರದಲ್ಲಿ ತೂಕ ಮತ್ತು ಅಳತೆ ಎಂಬ ಇಲಾಖೆ ಒಂದಿದೆ. ಅದು ವರ್ಷಕ್ಕೊಮ್ಮೆ ಗ್ರಾಹಕರ ಜಾಗೃತಿ ಉತ್ಸವ ಮಾಡಲು ಸೀಮಿತವಾಗಿದೆ. ಅದನ್ನು ಬಿಟ್ಟರೆ ಇನ್ನೂ ವರ್ಷ ಪೂರ್ತಿ ಈ ಇಲಾಖೆ ನಿದ್ದೆಗೆ ಜಾರಿರುತ್ತದೆ.
ಇತ್ತೀಚೆಗೆ ತೂಕ ಮತ್ತು ಅಳತೆ ಇಲಾಖೆ ಒಂದು ಪ್ರಕರಣೆ ನೀಡಿ, ದುಬಾರಿ ಬೆಲೆಗೆ ಮಾರಾಟ ಮಾಡುವವರ ಕುರಿತು ಮಾಹಿತಿ ನೀಡಿ ಎಂದು ತಿಳಿಸಿತ್ತು. ಇದಕ್ಕಾಗಿ ಸಹಾಯವಾಣಿಯೊಂದನ್ನು ಆರಂಭಿಸಿರುವುದಾಗಿ ತಿಳಿಸಿತ್ತು, ಆದರೆ ಆ ಸಂಖ್ಯೆ ಯಾರಿಗೂ ನೆನಪಿದ್ದ ಹಾಗಿಲ್ಲ. ಇಂತಹ ಸಂಕಷ್ಟ ಕಾಲದಲ್ಲಿ ಆರೋಗ್ಯ ಇಲಾಖೆ ಹಾಗೂ ಗೃಹ ಇಲಾಖೆಯಷ್ಟೇ ಮಹತ್ವದ ಜವಾಬ್ದಾರಿ ನಿಭಾಯಿಸಬೇಕಿದ್ದ ತೂಕ ಮತ್ತು ಅಳತೆ ಇಲಾಖೆ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಕೇವಲ ಪ್ರಚಾರಕಷ್ಟೇ ಕೆಲ ಇಲಾಖೆಗಳು ಸೀಮಿತವಾಗಿವೆ.