Breaking News
Home / Uncategorized / ತಮಿಳುನಾಡು ಮಾದರಿ ಪರಿಹಾರ ನೀಡಲಿ:   ಸತೀಶ ಜಾರಕಿಹೊಳಿ

ತಮಿಳುನಾಡು ಮಾದರಿ ಪರಿಹಾರ ನೀಡಲಿ:   ಸತೀಶ ಜಾರಕಿಹೊಳಿ

Spread the love

ಬೆಳಗಾವಿ –  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದರು.
ಸತೀಶ ಅವರೊಂದಿಗೆ ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ ಅವರು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳು, ಸದ್ಯದ ಸ್ಥಿತಿಗತಿ ಕುರಿತು ಸುಧೀರ್ಘವಾಗಿ ಚರ್ಚೆ ಮಾಡಿದರು.
ರೆಮ್ ಡಿಸಿವಿರ್, ಆಕ್ಸಿಜನ್ ಕೊರತೆ ನೀಗಿಸಿ:
“ಜಿಲ್ಲೆಯಲ್ಲಿ ರೆಮ್ ಡಿಸಿವಿರ್ ಲಸಿಕೆ ಹಾಗೂ ಆಕ್ಸಿಜನ್ ಕೊರತೆ ಇದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಹೀಗಾಗಿ, ಇವುಗಳ ಕೊರತೆಯಾಗದಂತೆ ಕ್ರಮಕೈಗೊಳ್ಳಿ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಕೋವಿಡ್ ಸೋಂಕಿತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕು. ಅಲ್ಲದೆ ರೆಮಡಿಸಿವರ್ ಲಸಿಕೆ‌ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಅದನ್ನು ಸರಿಯಾಗಿ ನೀಡುವಂತೆ ಒತ್ತಾಯಿಸಿದರು.
ಬೆಳಗಾವಿಗೆ ತಾರತಮ್ಯ ಸಹಿಸಲ್ಲ: ಲಕ್ಷ್ಮಿ ಹೆಬ್ಬಾಳಕರ್ 
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, “ಜಿಲ್ಲೆಯಲ್ಲಿ ನಿತ್ಯ ಕೋವಿಡ್ ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿಯತ್ತ ಸಾಗುತ್ತಿದೆ. ಸರಕಾರ ಕೊಡುವುದು ಒಂದು ಲೆಕ್ಕ, ನಮ್ಮ ಬಳಿ ಬರುವುದು ಒಂದು ಲೆಕ್ಕವಾಗಿದೆ” ಎಂದು ಆರೋಪಿಸಿದರು.
“ಬಿಮ್ಸ್ ನಲ್ಲಿ 350 ಆಕ್ಸಿಜನ್ ಬೆಡ್ ಲಭ್ಯವಿದೆ. 200 ಹೆಚ್ಚುವರಿ ಆಕ್ಸಿಜನ್ ಬೆಡ್ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಹೆಚ್ಚುವರಿ ಬೆಡ್ ಗಳನ್ನು ನೀಡದೇ ಸರ್ಕಾರ ಬೆಳಗಾವಿಗೆ ತಾರತಮ್ಯ ಮಾಡುತ್ತಿದೆ. ಇಂತಹ ತಾರತಮ್ಯವನ್ನು ನಾವು ಸಹಿಸುವುದಿಲ್ಲ. ಕೂಡಲೇ ಈ ಬಗ್ಗೆ ವ್ಯವಸ್ಥೆ ಮಾಡಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವ್ಯಾಕ್ಸಿನ್ ಲಸಿಕೆ ಯಾವಾಗ ಕೊಡುತ್ತೀರಿ? ಎಷ್ಟು ತಾಲೂಕಿಗೆ ಎಷ್ಟು ಸಂಖ್ಯೆಯಲ್ಲಿ ಕೊಟ್ಟಿದ್ದೀರಿ? ಎಷ್ಟು ಬರುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ಕೊಡಬೇಕು. ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಲು ಗ್ರಾಮೀಣ ಭಾಗದ ಜನರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಇದಕ್ಕೆ ಬೇರೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ,  ಪೊಲೀಸ್ ಇಲಾಖೆಯಿಂದ ವೈದ್ಯರಿಗೆ ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದರು.
ನಾವು ಮಾತನಾಡಿದರೆ ಈ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಾರೆ ಎನ್ನುತ್ತಾರೆ. ಆದರೆ ಜನರ ಪರವಾಗಿ ಮಾತನಾಡದೆ ಸುಮ್ಮನಿರಲು ಸಾಧ್ಯವೆ? ಈ ಸಂದರ್ಭದಲ್ಲೂ ನೀವು ಸಹಾಯ ಮಾಡದಿದ್ದರೆ ಹೇಲೆ ಎಂದು ಜನರು ನಮ್ಮನ್ನು ಕೇಳುತ್ತಾರೆ. ಅವರ ಪರಿಸ್ಥಿತಿಗೆ ಉತ್ತರಿಸಲು, ಸಹಾಯ ಮಾಡಲು ನಾವು ಹೆಲ್ಪ್ ಲೆಸ್ ಆಗುತ್ತಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಜಿಲ್ಲಾಧಿಕಾರಿಗೆ ತಿಳಿಸಿದರು.
ಬಿಮ್ಸ್ ನಲ್ಲಿ 800 ಬೆಡ್ ಗಳಿವೆ:
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, “ಬಿಮ್ಸ್ ನಲ್ಲಿ 800 ಬೆಡ್ ಗಳಿವೆ. ಸಮಸ್ಯೆಗೆ ಅನುಗುಣವಾಗಿ ನಾವು ವ್ಯವಸ್ಥೆ ಮಾಡುತ್ತೇವೆ. ತಾಲೂಕಾ ಆಸ್ಪತ್ರೆಯಲ್ಲಿ 30 ಬೆಡ್ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಬೆಳಗಾವಿ ಗೆ ಬರದಂತೆ ನೋಡಿಕೊಳ್ಳಬೇಕು. ಅವಶ್ಯಕತೆ ಇದ್ದರೆ ಮಾತ್ರ ಅವರು ಪತ್ರ ತೆಗೆದುಕೊಂಡು ಬಂದರೆ ಬಿಮ್ಸ್ ನಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ” ಎಂದು ತಿಳಿಸಿದರು.
“ಜಿಲ್ಲೆಗೆ ಅನುಗುಣವಾಗಿ ರೆಮಡಿಸಿವರ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಸಾರ್ವಜನಿಕರು ಭಯ ಪಡುವ ಅಗತ್ಯ ಇಲ್ಲ” ಎಂದು ಹೇಳಿದರು.
ಸಿಬ್ಬಂದಿ ಕೊರತೆ ಸರಿಪಡಿಸಿ:
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, “ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಅದನ್ನು ಸರಿದೂಗಿಸಬೇಕು. 10 ರಿಂದ 15 ಜನ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನಿಯುಕ್ತಿ ಮಾಡುವಂತೆ” ಸೂಚಿಸಿದರು.
ಶೀಘ್ರದಲ್ಲೇ ಗುತ್ತಿಗೆಯಾಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಅಲ್ಲದೇ ಅವರಿಗೆ ಮುಕ್ತವಾಗಿ ಸೇವೆ ಮಾಡಲು ಅವಕಾಶ ಕಲ್ಪಿಸಲಾಗುವುದು” ಎಂದು‌ ಮಾಹಿತಿ ನೀಡಿದರು.
ಆಕ್ಸಿಜನ್ ಘಟಕ ಸ್ಥಾಪನೆಯಾದರೆ ಸಮಸ್ಯೆ ಇಲ್ಲ:
ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, “ಜಿಲ್ಲೆಯಲ್ಲಿ ಜಿಲ್ಲಾಡಳಿತ ಆಕ್ಸಿಜನ್ ಘಟಕ ಸ್ಥಾಪನೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಸರ್ಕಾರದ ಬಳಿ ಆಕ್ಸಿಜನ್ ಕೇಳುವ ಅವಶ್ಯಕತೆಯೇ ಬರುವುದಿಲ್ಲ” ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ್ ಸೇರಿ ಇನ್ನಿತರರು ಇದ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಸರ್ವಪಕ್ಷ ಸಭೆ ಕರೆಯಲಿ; ಅಗತ್ಯ ಸಹಕಾರ ನೀಡಲು ಸಿದ್ಧರಿದ್ದೇವೆ
 ಲಾಕ್ ಡೌನ್ ನಿಂದ ಬಡ ಜನರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ, ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರವೂ ಬಡವರಿಗೆ ಪರಿಹಾರ ಕೊಡಬೇಕೆಂದು” ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ‌ ಜಾರಕಿಹೊಳಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಕಾಂಗ್ರೆಸ್ ಶಾಸಕರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಲಾಕ್ ಡೌನ್ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ, ಅಲ್ಲಿನ ಬಡವರಿಗೆ ತಕ್ಷಣ ನಾಲ್ಕು ಸಾವಿರ ರೂ. ಪರಿಹಾರ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಬಡವರಿಗೆ ಕನಿಷ್ಟ ಒಂದು ತಿಂಗಳ ಮಟ್ಟಿಗಾದರು ಪರಿಹಾರ ನೀಡಿದರೆ ಅನಕೂಲವಾಗುತ್ತದೆ” ಎಂದರು.
ಉಸ್ತುವಾರಿ ಸಚಿವರು ಸರ್ವಪಕ್ಷ ಸಭೆ ಕರೆಯಲಿ:
“ಆಕ್ಸಿಜನ್ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಬೆಳಗಾವಿಗೆ ಹೆಚ್ಚು ಆಕ್ಸಿಜನ್ ಹಾಗೂ ಲಸಿಕೆಗಳ ಅಗತ್ಯವಿದೆ. ಹೀಗಾಗಿ, ಜಿಲ್ಲಾ‌ ಉಸ್ತುವಾರಿ ಸಚಿವರು ಕೂಡಲೇ ಪಕ್ಷಾತೀತವಾಗಿ ಎಲ್ಲರ ಸಭೆ ಕರೆಯಬೇಕು. ನಾವು ಸರ್ಕಾರಕ್ಕೆ ಅಗತ್ಯ ಸಹಕಾರ ಕೊಡಲು ಸಿದ್ದರಿದ್ದೇವೆ” ಎಂದು ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿದ್ದೇವೆ: 
“ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿದ್ದ ಜಿಲ್ಲಾಧಿಕಾರಿ ಹಿರೇಮಠ ಅವರು ಇಂದೇ ಮತ್ತೇ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ, ಸಮಸ್ಯೆಗಳನ್ನು ಸರಿಪಡಿಸಲು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಲಾಗಿದೆ” ಎಂದರು.
“ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಲು ಜಿಲ್ಲೆಯ ಜನರು ಕೂಡ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
“ಕೋವಿಡ್ ನಿಂದ ಮೃತಪಟ್ಟವರು ಹಾಗೂ ಸ್ಮಶಾನದಲ್ಲಿ ಸೋಂಕಿತರ  ಶವ ಸಂಸ್ಕಾರವಾಗುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ” ಎಂದು ಹೇಳಿದರು.
“ಬೆಳಗಾವಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್, ರೆಮ್ ಡಿಸಿವಿರ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಹೆಚ್ಚಿಗೆ ಪೂರೈಕೆ ಮಾಡುವಂತೆ ಸೂಚನೆ‌ ನೀಡಿದ್ದು, ಅವರು ತಕ್ಷಣ ಸರಿಪಡಿಸುತ್ತಾರೆ ಎನ್ನುವ ವಿಶ್ವಾಸ ಇದೆ” ಎಂದರು.
“ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯ ಇದ್ದರೂ, ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಆಕ್ಸಿಜನ್ ಇರುವ ಕಡೆಯಿಂದ ಸದ್ಯ ಆಮದು ಮಾಡಿಕೊಳ್ಳುವುದು ಸೂಕ್ತ” ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ್, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ ಇದ್ದರು.

Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ