ಮಂಡ್ಯ: ಕೋವಿಡ್ ಸಮಯದಲ್ಲಿ ರಾಜಕಾರಣ ಮಾಡಿದರೆ ನನಗೆ ರಕ್ತ ಕುದಿಯುತ್ತದೆ ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ಅವರು ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ತಮಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಅರ್ಧದಲ್ಲೇ ಎದ್ದು ಹೊರ ನಡೆದ ಸುಮಲತಾ ಅಂಬರೀಶ್ ಜಾ.ದಳ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಎಷ್ಟೋ ಚುನಾವಣೆಗಳನ್ನು ಗೆದ್ದು ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಸಲಹೆ ಕೊಡುವುದನ್ನು ಬಿಟ್ಟು ಕಿರುಚಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಇಲ್ಲೇನು ಡ್ರಾಮಾ ನಡೆಯುತ್ತಿದೆಯಾ? ಎಂದು ಪ್ರಶ್ನಿಸಿದರು.
ನಾನು ಒಬ್ಬ ಸಂಸದೆಯಾಗಿ ಆಕ್ಸಿಜನ್ ಸಿಲಿಂಡರ್ ಅನ್ನು ತಂದಿದ್ದೇನೆ. ಈ ಬಗ್ಗೆ ಅವರ ಕ್ಷೇತ್ರದ ಜನತೆ ಕೇಳಿರಬೇಕು. ಅದಕ್ಕಾಗಿ ಒಬ್ಬೊಬ್ಬರೂ ಈ ವಿಷಯದಲ್ಲಿ ರಾಜಕಾರಣ ವಾಡುತ್ತಿದ್ದಾರೆ. ರಾಜಕಾರಣ ಮಾಡಿಕೊಳ್ಳಲಿ, ಮುಂದೆಯೂ ಮಾಡಲಿ.
ನನಗೇನೂ ಬೇಜಾರಿಲ್ಲ. ಕೋವಿಡ್ ಸಮಯದಲ್ಲಿ ಮಾನವೀಯತೆ ತೋರುವುದನ್ನು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.