ಈ ಕೊರೊನಾ ಎನ್ನುವ ಮಹಾಮಾರಿ ಜನರ ಜೀವನಶೈಲಿಯನ್ನು ಅದೆಷ್ಟು ಬದಲಾಯಿಸುತ್ತಾ ಸಾಗುತ್ತಿದೆ ಎನ್ನುವುದಕ್ಕೆ ಕಳೆದ ಹದಿನಾಲ್ಕು ತಿಂಗಳಲ್ಲಿ ಹತ್ತು ಹಲವು ನಿರ್ದರ್ಶನಗಳು ನಮ್ಮ ಮುಂದಿದೆ.
ಕಳೆದ ಒಂದು ವಾರದಿಂದ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಸೇರಿದಂತೆ ಅವಶ್ಯಕ ಸೇವೆಗಳನ್ನು ತೆರೆಯಲು ಮಾತ್ರ ಸರಕಾರ ಅವಕಾಶ ಕೊಟ್ಟಿದೆ. ಇದರಲ್ಲಿ, ಮದ್ಯ ಪಾರ್ಸೆಲ್ ಕೂಡಾ ಒಂದು. ಹಾಗಾದರೆ, ಮದ್ಯ ಮಾರಾಟ ಅವಶ್ಯಕ ಸೇವೆಯಡಿಯಲ್ಲಿ ಬರುತ್ತಾ ಎಂದರೆ, ಸರಕಾರಕ್ಕೆ ಇದು ಅತ್ಯವಶ್ಯಕ.
ಕೋವಿಡ್ ಕಾರಣದಿಂದ ಪ್ರಾರ್ಥನಾ ಮಂದಿರಗಳು ಬಂದ್, ಧಾರ್ಮಿಕ ಕಾರ್ಯಕ್ರಮಗಳು ಬಂದ್, ಮದ್ಯಮಾರಾಟಕ್ಕೆ ಮಾತ್ರ ಅವಕಾಶ, ಎಂತಹ ಕಾಲ ಬಂತಪ್ಪಾ ಎಂದು ಕೋಡಿಶ್ರೀಗಳು ಹಿಂದೊಮ್ಮೆ ಬೇಸರಿಸಿಕೊಂಡಿದ್ದರು.
ಬೆಳಗ್ಗೆ ಆರರಿಂದ ಹತ್ತರವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿದೆ. ಹಾಗಾಗಿ, ಮದ್ಯಪ್ರಿಯರು ಬೆಳಗ್ಗೆ ಹಾಲು ತೆಗೆದುಕೊಳ್ಳಲು ಹೋದಾಗ, ಮದ್ಯವನ್ನು ಪಾರ್ಸೆಲ್ ತೆಗೆದುಕೊಳ್ಳಬೇಕು. ಹಾಗಾಗಿ, ಒಂದು ಕೈಯಲ್ಲಿ ಹಾಲು, ಇನ್ನೊಂದು ಕೈಯಲ್ಲಿ ಆಲ್ಕೋಹಾಲ್. ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಎಂದು ಮನೆಯಲ್ಲಿ ಹಾಡು ಬರುತ್ತಿರ ಬೇಕಾದರೆ ಹಾಲು, ಆಲ್ಕೋಹಾಲ್ ಎರಡರದ್ದೂ ಪ್ರವೇಶವಾಗಿರುತ್ತದೆ.
ವೈನ್ ಮರ್ಚೆಂಟ್ ಅಸೋಶಿಯೇಶನ್ ಇತ್ತೀಚೆಗೆ ಸರಕಾರಕ್ಕೆ ಮನವಿ ಮಾಡಿತ್ತು. ಮದ್ಯ ಮಾರಾಟದ ಸಮಯವನ್ನು ಇನ್ನೂ ಹೆಚ್ಚಿಸಿ ಎಂದು. ಬೆಳ್ಳಂಬೆಳಗ್ಗೆ ಮದ್ಯ ಖರೀದಿಸಲು ಜನರಿಗೆ ಮುಜುಗುರವಾಗುತ್ತಿದೆ ಎಂದು. ಆದರೆ, ಮದ್ಯಪ್ರಿಯರು ಈ ವಿಚಾರದಲ್ಲಿ ಅಂತಹ ಮುಜುಗರವೇನೂ ಪಟ್ಟಿಲ್ಲ ಎನ್ನುತ್ತದೆ ಅಬಕಾರಿ ಇಲಾಖೆಯ ಆದಾಯ.
ಕೊರೊನಾ ಸಂಕಷ್ಟದ ಸಮಯದಲ್ಲೂ ಸರಕಾರದ ಟಾರ್ಗೆಟ್ ಅನ್ನು ಒಂದು ತಿಂಗಳ ಮುನ್ನವೇ ರೀಚ್ ಆದ ಇಲಾಖೆ ಎಂದರೆ ಅದು ಅಬಕಾರಿ ಇಲಾಖೆ. ಯಾವ ಮಟ್ಟಿಗೆ ಸರಕಾರಕ್ಕೆ ರಾಜಸ್ವ ಈ ಇಲಾಖೆ ತಂದು ಕೊಡುತ್ತಿದೆ ಎಂದರೆ ಅಧಿಕಾರಿಗಳೇ ಗೋಸ್ಲೋ ಎನ್ನುತ್ತಿದ್ದಾರೆ. ಮದ್ಯದ ಗಮ್ಮತ್ತೇ ಅಂತದ್ದು..