ಬೆಂಗಳೂರು: ಶಾಸಕ ಎಂಪಿ ರೇಣುಕಾಚಾರ್ಯ ಅವರು ಇತ್ತೀಚೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜೀನಾಮೆಗೆ ಒತ್ತಾಯ ಮಾಡಿದ್ದರು. ಈ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಾ. ಕೆ. ಸುಧಾಕರ್ ಅವರು ರೇಣುಕಾಚಾರ್ಯ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು. ರಾಜೀನಾಮೆ ಕೊಟ್ಟು ಕಷ್ಟ ಅನುಭವಿಸಿ ಇಲ್ಲಿಗೆ ಬಂದಿದ್ದೇನೆ. ಸರ್ಕಾರನೂ ಬಂದಿದೆ. ಈ ಸಮಯದಲ್ಲಿ ನಾನು ರಾಜಕೀಯ ಮಾತಾಡಿಲ್ಲ ಎಂದಿದ್ದಾರೆ.
ನಾನು ಕೊರೊನಾ ಯೋಧನ ರೀತಿಯಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದೇನೆ. ಈ ಸಮಯದಲ್ಲಿ ನಾನು ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ. ಕೊರೊನಾ ಮುಗಿಯೋವರೆಗೂ ನಾನು ಯಾವ ಬೇಸರವನ್ನೂ ವ್ಯಕ್ತಪಡಿಸೊಲ್ಲ. ನನಗೆ ಯಾವ ಆಸೆಯೂ ಇಲ್ಲ. ಸರ್ಕಾರ ಮತ್ತು ಪಕ್ಷ ಕೊಡೋ ಆದೇಶದಂತೆ ಕೆಲಸ ಮಾಡ್ತೀನಿ. ಯಾರ ವೈಯಕ್ತಿಕ ವಿಚಾರವನ್ನು ನಾನು ಮಾತಾಡೊಲ್ಲ. ಯಾರ ಬಗ್ಗೆಯೂ ನಾನು ಹಗುರವಾಗಿ ಮಾತಾಡೊಲ್ಲ. ರೇಣುಕಾಚಾರ್ಯ ಬಗ್ಗೆ ನನಗೆ ಈಗಲೂ ಗೌರವ ಇದೆ ಎಂದು ಮಾರ್ಮಿಕವಾಗಿ ಹೇಳಿದರು.
ಅಧಿಕಾರ ಹಂಚಿಕೆ ಮಾಡಿರೋದು ನನಗೆ ಒಳ್ಳೆಯದೇ ಆಯ್ತು; ಈಗ ಆನೆ ಬಲ ಬಂದಂತಾಗಿದೆ:
ಸಚಿವರಿಗೆ ಅಧಿಕಾರ ಹಂಚಿಕೆ ಮಾಡಿರೋ ವಿಚಾರ ಪ್ರಸ್ತಾಪಿಸಿದಾಗ ಅಧಿಕಾರ ಹಂಚಿಕೆ ಮಾಡಿರೋದು ನನಗೆ ಯಾವುದೇ ಬೇಸರ ಇಲ್ಲ. ನನಗೆ ಇನ್ನೂ ಒಳ್ಳೆಯದಾಯ್ತು. ನನಗೆ ಈಗ ಆನೆ ಬಲ ಬಂದಂತೆ ಆಗಿದೆ. ಹಿರಿಯ ಸಚಿವರು ನನಗೆ ತುಂಬಾ ಸಹಕಾರ ಕೊಡ್ತಿದ್ದಾರೆ. ಎಲ್ಲರೂ ಅವ್ರವ್ರ ಕೆಲಸ ಉತ್ತಮವಾಗಿ ಮಾಡ್ತಿದ್ದಾರೆ. ಎರಡು-ಮೂರು ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನ ಸರಿ ಮಾಡ್ತಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕ್ಲುಪ್ತವಾಗಿ ಹೇಳಿದರು.
ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡಿ ಅಂತ ಕೇಳಿದ್ದೇವೆ: ಸದ್ಯ, ಲಸಿಕೆ ಲಭ್ಯವಿಲ್ಲದೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಸ್ಥಗಿತಗೊಂಡಿರುವ ವಿಚಾರ ಪ್ರಸ್ತಾಪಿಸಿದ ಆರೋಗ್ಯ ಸಚಿವ ಸುಧಾಕರ್, ನಮ್ಮ ದೇಶದಲ್ಲಿ ಎರಡು ಲಸಿಕ ಕಂಪನಿಗಳು ಇವೆ. ಉತ್ಪಾದನೆ ಕಡಮೆ ಆಗ್ತಿರೋದ್ರೀಂದ ಲಸಿಕೆ ನಮಗೆ ಲಭ್ಯವಾಗ್ತಿಲ್ಲ. ಈಗಾಗಲೇ ಎರಡು ಕಂಪನಿಗಳ ಜೊತೆ ಮಾತಾಡಿದ್ದೇವೆ. ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡಿ ಅಂತ ಕೇಳಿದ್ದೇವೆ. ಮೇ 15 ಅಥವಾ ಮೇ 15 ನಂತ್ರ ಲಸಿಕೆ ಅಭಿಯಾನ ಪ್ರಾರಂಭ ಮಾಡ್ತೀವಿ. ಲಸಿಕೆ ಕೋಡೋದು ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡೋ ಕಡೆ ನನ್ನ ಗಮನ ಇದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಿನ್ನೆಗೆ 1 ಕೋಟಿ ಜನರಿಗೆ ಕೊವಿಡ್ ಲಸಿಕೆ ನೀಡಿಕೆಯಾಗಿದೆ. 18-44 ವರ್ಷದೊಳಗಿನವರಿಗೆ ಲಸಿಕೆ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. 3ನೇ ಅಲೆ ಬರುವುದರೊಳಗೆ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.