ಬೆಂಗಳೂರು: ಕೊರೊನಾ ಮಾಹಾಮಾರಿಯಿಂದ ಎಂಥ ಘನಘೋರ ಸ್ಥಿತಿ ಎದುರಾಗಿದೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿ. ಈ ಸ್ಟೋರಿ ನೋಡಿದ್ರೆ ಎಂಥವ್ರಿಗೂ ಕಣ್ಣೀರು ಬರುತ್ತೆ. ವ್ಯಕ್ತಿಯೊಬ್ಬರು ಒಂದೇ ವಾರದ ಅಂತರದಲ್ಲಿ ಕೋವಿಡ್ನಿಂದ ತಾಯಿ ಹಾಗೂ ನಾನ್-ಕೋವಿಡ್ ನಿಂದ ತಂದೆಯನ್ನ ಕಳೆದುಕೊಂಡಿದ್ದಾರೆ.ಆಸ್ಪತ್ರೆಗಳ ಧನದಾಹಕ್ಕೆ ನನ್ನ ತಾಯಿಯನ್ನ ಕಳೆದುಕೊಂಡೆ ಅಂತ ಮೃತ ಸೋಂಕಿತ ಮಹಿಳೆಯ ಮಗ ಕಣ್ಣೀರು ಹಾಕಿದ್ದಾರೆ. ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ನನ್ನ ತಾಯಿ ಸಾವನ್ನಪ್ಪಿದ್ರು ಅಂತ ಅವರು ಆರೋಪ ಮಾಡಿದ್ದಾರೆ.
ಏಪ್ರಿಲ್ 22ನೇ ತಾರೀಖಿನಂದು 55 ವರ್ಷದ ರತ್ನಮ್ಮ ಎಂಬವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಅವರನ್ನ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಏಪ್ರಿಲ್ 24ರಂದು ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.ಅಪ್ಪ ತೀರಿಕೊಂಡ ಮೂರೇ ದಿನಕ್ಕೆ ತಾಯಿಯನ್ನೂ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಒಡವೆ ಮಾರಿ ದುಡ್ಡು ಕೊಡ್ತೇನೆ, ತಾಯಿಯನ್ನ ಬದುಕಿಸಿ ಕೊಡಿ ಅಂದ್ರು ತಾಯಿ ಬದುಕಲಿಲ್ಲ ಅಂತ ದುಃಖಿಸುತ್ತಿದ್ದಾರೆ.
ಮಹಿಳೆ ಮೃತಪಟ್ಟ ಬಳಿಕವೂ ಶವಕ್ಕೆ ಹಣ ನೀಡುವಂತೆ ಆಸ್ಪತ್ರೆಯವರು ಒತ್ತಡ ಹಾಕಿದ್ರು ಎನ್ನಲಾಗಿದೆ. 30 ಸಾವಿರ ಹಣ ಕೊಟ್ಟು ಮೃತದೇಹ ತೆಗೆದುಕೊಂಡು ಹೋಗಿ ಅಂತ ಧಮ್ಕಿ ಹಾಕಿದ್ರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.