ಬೆಂಗಳೂರು: ಕಾರ್ಮಿಕರ ದಿನಾಚರಣೆಯಂದು ಕೊವಿಡ್ ವಾರಿಯರ್ಗಳಿಗೆ ನೆರವಾಗಲು ಮುಂದಾದ ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ತಮ್ಮ ಫೇಸ್ಬುಕ್ ಖಾತೆಯಲ್ಲಿ, ನನ್ನ 3 ತಿಂಗಳ ಸಂಬಳವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ತಮ್ಮ ಸ್ವಂತ ಹಣದಲ್ಲಿ 120 ಬೆಡ್ಗಳ ಆಸ್ಪತ್ರೆ ನಿರ್ಮಾಣ ಮಾಡಿರುವ ಶಾಸಕ ಗಣೇಶ್ ಹುಕ್ಕೇರಿ ಉಚಿತ ಆಯಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಮನವಿಯಂತೆ ಒಂದು ತಿಂಗಳ ಸಂಬಳವನ್ನ ಕೊವಿಡ್ ನಿಧಿಗೆ ನೀಡಿದ್ದೇನೆ. ಅದರ ಜೊತೆಗೆ ಮುಂದಿನ ಮೂರು ತಿಂಗಳ ಸಂಬಳವನ್ನ ಫ್ರಂಟ್ ಲೈನ್ ಕೊವಿಡ್ ವಾರಿಯರ್ಗಳಿಗೆ ನೀಡಲು ನಿರ್ಧಾರ ಮಾಡಿದ್ದೇನೆ ಎಂದು ಶಾಸಕ ಗಣೇಶ್ ಹುಕ್ಕೇರಿ ತಿಳಿಸಿದ್ದಾರೆ.
ಈಗಾಗಲೇ ರೋಗಿಗಳಿಗೆ ಉಚಿತ ಊಟ, ತಿಂಡಿ, ಹಣ್ಣು ಎಲ್ಲವನ್ನೂ ತಮ್ಮ ಅಣ್ಣಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಗಣೇಶ್ ಹುಕ್ಕೇರಿ ನಿಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇರುವ ಹಿನ್ನೆಲೆ, ಅಣ್ಣಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಖಾಲಿ ಇರುವ ಸ್ಥಾನಕ್ಕೆ ಸಂಬಳ ನೀಡಿ ಸಿಬ್ಬಂದಿಗಳನ್ನು ಕೂಡ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.