ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ಎ. 30 ರಂದು ನಡೆಯಿತು. ಎರಡು ಕಡೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಸಂಪಾದಿಸಿದೆ. ಅಧಿಕಾರದ ಗದ್ದುಗೆಯೇರಿದೆ. ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಹಿನ್ನಡೆ ಸಾಧಿಸಿವೆ.
ಭದ್ರಾವತಿ: ನಗರಸಭೆಯ 35 ರಲ್ಲಿ, 34 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷ 18 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಮತ್ತೆ ನಗರಸಭೆ ಆಡಳಿತ ಗದ್ದುಗೆಯೇರಿದೆ.
ಉಳಿದಂತೆ ಜೆಡಿಎಸ್ ಪಕ್ಷ 11 ಹಾಗೂ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಬಿಜೆಪಿ ಪಕ್ಷ ಕೇವಲ 4 ಸ್ಥಾನಗಳಲ್ಲಿ ಜಯ ಸಂಪಾದಿಸಿ, ತೀವ್ರ ಹಿನ್ನಡೆ ಅನುಭವಿಸಿದೆ. ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಚುನಾವಣೆಯನ್ನು ಬಿಜೆಪಿ ಪಕ್ಷವು ಸವಾಲಾಗಿ ತೆಗೆದುಕೊಂಡಿತ್ತು. ಪಕ್ಷದ
ಅತಿರಥ-ಮಹಾರಥ ನಾಯಕರು ಭದ್ರಾವತಿ ಪಟ್ಟಣದಲ್ಲಿ ಪ್ರಚಾರ ನಡೆಸಿದ್ದರು.
ಆದರೆ ಕೇವಲ 4 ಸ್ಥಾನಗಳಿಗೆ ಆ ಪಕ್ಷ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಜೆಡಿಎಸ್ ಹಿನ್ನಡೆ ಆ ಪಕ್ಷದ ನಾಯಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.