ಮೈಸೂರು: ವಾರಾಂತ್ಯದ ಕರ್ಫ್ಯೂ ನಿಯಮ ಉಲ್ಲಂಘಿಸಿ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಬಳಿ ಕಾರಿನಲ್ಲಿ ತೆರಳುತ್ತಿದ್ದ ಪ್ರಸಿದ್ಧ ನಟ ಮಂಡ್ಯ ರಮೇಶ್ಗೆ ಎಸ್ಐ ಪುಟ್ಟರಾಜು ಕರ್ಫ್ಯೂ ನಿಯಮ ಉಲ್ಲಂಘಿಸದಂತೆ ಬುದ್ಧಿವಾದ ಹೇಳಿದ್ದಾರೆ. ಅಲ್ಲದೇ ಮೈಸೂರಿನ ಗ್ರಾಮೀಣ ಪ್ರದೇಶಗಳಲ್ಲೂ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಜನರಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಕುಂಟು ನೆಪ ಹೇಳಿ ತಿರುಗಾಡುವವರನ್ನು ಖಾಕಿ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯಲ್ಲಿ ಸಬ್ ಇನ್ಸಪೆಕ್ಟರ್ ಪುಟ್ಟರಾಜು ಮತ್ತು ಇತರ ಪೊಲೀಸ್ ಸಿಬ್ಬಂದಿ ವಾರಾಂತ್ಯದ ಕರ್ಫ್ಯೂ ಇರುವ ಕಾರಣ ವಾಹನ ಸವಾರರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಟ ಮಂಡ್ಯ ರಮೇಶ್ ಅದೇ ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಕಾರನ್ನು ಎಸ್ಐ ಪುಟ್ಟರಾಜು ನಿಲ್ಲಿಸಿ ವಾರಾಂತ್ಯದ ಕರ್ಫ್ಯೂ ಇದ್ದರೂ ಪ್ರಯಾಣಿಸುತ್ತಿರುವ ಕಾರಣ ಕೇಳಿದರು. ನಟ ಮಂಡ್ಯ ರಮೇಶ್ ಮದುವೆಗೆ ಹೋಗಿ ಬರುತ್ತಿರುವುದಾಗಿ ಹೇಳಿದರು. ಜತೆಗೆ ಮದುವೆಯ ಲಗ್ನಪತ್ರಿಕೆಯನ್ನೂ ತೋರಿಸಿದರು. ಅದಕ್ಕೆ ಉತ್ತರಿಸಿದ ಎಸ್ಐ ಪುಟ್ಟರಾಜು ಮದುವೆ ವಿಚಾರವಾಗಿ ಕಲ್ಯಾಣಮಂಟಪದಲ್ಲೇ ಇರುವವರಿಗೆ ಅನುಮತಿ ಕೊಟ್ಟಿದ್ದಾರೆ. ನೀವು ಕಾರಿನಲ್ಲಿ ಹೋಗುವುದಕ್ಕೆ ಅನುಮತಿ ಪಡೆಯಬೇಕು. ವಾರಾಂತ್ಯದ ಕರ್ಫ್ಯೂ ಇದ್ದಾಗ ಮದುವೆಗೆ ತೆರಳಲು ಪಾಸ್ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಪ್ರಯಾಣ ಮಾಡಬೇಕು ಎಂದು ಬುದ್ಧಿವಾದ ಹೇಳಿದರು.
ನಿನ್ನೆ ಸಂಜೆಯಿಂದ (ಏಪ್ರಿಲ್ 23) ವಾರಾಂತ್ಯದ ಕರ್ಫ್ಯೂ ಜಾರಿಯಾಗಿದ್ದು ಸೋಮವಾರ (ಏಪ್ರಿಲ್ 26) ಬೆಳಗ್ಗೆಯ ತನಕವೂ ಜಾರಿಯಲ್ಲಿ ಇರಲಿದೆ. ಈ ವೇಳೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ದಿನನಿತ್ಯದ ಬಳಕೆಯ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಅನಗತ್ಯ ಓಡಾಟ ನಡೆಸದಂತೆ ಪೊಲೀಸರು ಜನರಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ.