ಬೆಂಗಳೂರು, ಏ.19-ಮುಷ್ಕರದಲ್ಲಿ ಭಾಗಿಯಾಗಿರುವ ಕೆಲವು ಉದ್ಯೋಗಿಗಳ ಅಮಾನತು ಆದೇಶಗಳನ್ನು ಹಿಂತೆಗೆದುಕೊಳ್ಳುವ ಮತ್ತು ಭವಿಷ್ಯದಲ್ಲಿ ವಜಾಗೊಳಿಸಿದ ಆದೇಶಗಳನ್ನು ರದ್ದುಗೊಳಿಸುವಂತಹ ಯಾವುದೇ ನಿಬಂಧನೆ ಅಥವಾ ಆಲೋಚನೆ ಸರ್ಕಾರದ ಮಟ್ಟದಲ್ಲಿ ಇಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.
ಮುಷ್ಕರವನ್ನು ಪ್ರೋತ್ಸಾಹಿಸುವ ಮತ್ತು ಕರ್ತವ್ಯಕ್ಕೆ ಗೈರುಹಾಜರಾದವರ ವಿರುದ್ಧ ಬಿಎಂಟಿಸಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಮಾನತು ಅಥವಾ ವಜಾಗೊಳಿಸಿದ ನಂತರ ಅನೇಕ ಉದ್ಯೋಗಿಗಳು ಯೂನಿಯನ್ ಭಯದಿಂದಾಗಿ ಕೆಲಸಕ್ಕೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಕೆಲಸಕ್ಕೆ ಮರಳುವ ನೌಕರರಿಗೆ ಸಾಕಷ್ಟು ಪೊಲೀಸ್ ರಕ್ಷಣೆ ನೀಡಲಾಗುತ್ತಿದ್ದು, ಎಲ್ಲಾ ನೌಕರರು ನಕಲಿ ಸುದ್ದಿಗಳನ್ನು ನಂಬದೆ ತಕ್ಷಣ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬಿಎಂಟಿಸಿ ತಿಳಿಸಿದೆ.
ಮುಷ್ಕರದಲ್ಲಿ ಭಾಗಿಯಾಗಿರುವ ಕೆಲವು ಉದ್ಯೋಗಿಗಳ ಅಮಾನತು ಆದೇಶಗಳನ್ನು ಹಿಂತೆಗೆದುಕೊಂಡು, ಭವಿಷ್ಯದಲ್ಲಿ ವಜಾಗೊಳಿಸಿದ ಆದೇಶಗಳನ್ನು ರದ್ದುಗೊಳಿಸುತ್ತಾರೆ ಎಂದು ನಕಲಿ ಸಂದೇಶಗಳನ್ನು ಹರಡಿಸುತ್ತಿದ್ದಾರೆ. ಈ ರೀತಿಯ ಸಂದೇಶದ ಮೂಲಕ ನೌಕರರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ತಡೆಯುತ್ತಿದ್ದಾರೆ ಎಂದು ಬಿಎಂಟಿಸಿ ಅಕೃತ ಪ್ರಕಟಣೆ ತಿಳಿಸಿದೆ.
ಗೈರು ಹಾಜರಾಗುವ ಮೂಲಕ ಮುಷ್ಕರವನ್ನು ಬೆಂಬಲಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬಿಎಂಟಿಸಿ ಬಸ್ ಕಾರ್ಯಾಚರಣೆ ಸುಧಾರಿಸುತ್ತಿದೆ. ಅನೇಕ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಏ.16ರಂದು 873 ಬಸ್ಗಳು, ಏ.17 ರಂದು 1155 ಬಸ್ಗಳು ಹಾಗೂ ಏ.18 ರಂದು 1406 ಬಸ್ಗಳ ಕಾರ್ಯಾಚರಣೆ ಮಾಡಲಾಯಿತು ಎಂದು ಹೇಳಿದೆ.
ಮುಂದಿನ ದಿನಗಳಲ್ಲಿ ಮುಷ್ಕರದ ಬಗ್ಗೆ ಹೈಕೋರ್ಟ್ ಮಧ್ಯಸ್ಥಿಕೆ ಮಾಡುವುದೆಂದು ನಕಲಿ ಸುದ್ದಿಗಳನ್ನು ಹರಿಬಿಡುತ್ತಿರುವುದು ಮಂಗಳವಾರದವರೆಗೆ ಪ್ರತಿಭಟನೆಯನ್ನು ವಿಸ್ತರಿಸುವ ಕೊನೆಯ ಪ್ರಯತ್ನವಾಗಿದೆ ಎಂದು ತಿಳಿಸಿದೆ.