ದೇಶಾದ್ಯಂತ ಕೋವಿಡ್-19 ಎರಡನೇ ಅಲೆ ಶುರುವಾಗಿದ್ದು ಅದರಲ್ಲೂ ಮಹಾರಾಷ್ಟ್ರ, ಮುಂಬೈನಲ್ಲಿ ಮಿತಿ ಮೀರುತ್ತಿದೆ. ಈ ಹಿನ್ನೆಲೆ ಅಲ್ಲಿನ ರಾಜ್ಯ ಸರ್ಕಾರ ಕಳೆದ ಬುಧವಾರದಿಂದ ಮೇ 1ರವರೆಗೆ ಜನತಾ ಕರ್ಫ್ಯೂ ಜಾರಿ ಮಾಡಿ ಎಲ್ಲೆಂದರಲ್ಲಿ ನಾಲ್ಕು ಮಂದಿಗಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಜನತಾ ಕರ್ಫ್ಯೂ ಕಾರಣ ಅಲ್ಲಿನ ವಲಸೆ ಕಾರ್ಮಿಕರ, ಬಡವರ, ನಿರುದ್ಯೋಗಿಗಳ ಬದುಕು ಶೋಚನೀಯವಾಗಲಿದೆ. ಇದನ್ನರಿಂದ ಕೆಲವು ಮುಂಬೈ ಮೂಲದ ರೆಸ್ಟೊರೆಂಟ್ಗಳು, ಕೆಫೆಗಳು ಉಚಿತವಾಗಿ ಆಹಾರ ಧಾನ್ಯ, ಊಟ ವಿತರಿಸಲು ಮುಂದೆ ಬರುವುದರ ಮೂಲಕ ಅವರ ಹಸಿವು ನೀಗಿಸುತ್ತಿದೆ. ಮುಂಬೈ ಮೂಲದ ವೇಗನ್ ರೆಸ್ಟೋರೆಂಟ್ ನೂರಾರು ಬಡವರಿಗೆ ಉಚಿತವಾಗಿ ಆಹಾರ ಹಂಚುತ್ತಿದೆ. ಇನ್ನು ಪಶ್ಚಿಮ ಮುಂಬೈನ ಬಾಂದ್ರಾದಲ್ಲಿರುವ ಅರ್ಥ್ ಕೆಫೆ ರೆಸ್ಟೋರೆಂಟ್ ಕೂಡ ನಿರುದ್ಯೋಗಿಗಳಿಗೆ, ವಲಸಿಗ ಕಾರ್ಮಿಕರು ನೆಲೆಸಿರುವ ಪ್ರದೇಶಗಳಿಗೆ ತೆರಳಿ ಅವರ ಕುಟುಂಬಕ್ಕೆ, ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುತ್ತಿದೆ. ಅರ್ಥ್ ಕೆಫೆ ರೆಸ್ಟೋರೆಂಟ್ನ ಮಾಲೀಕರಾದ ವಿ ಕಾತ್ವಾಣಿ ಅವರು ಖುದ್ದಾಗಿ ನಿಂತು ಅವರು ನೆಲೆ ನಿಂತಿರುವ ವಾಸಸ್ಥಳಗಳಿಗೆ ತೆರಳಿ ಪ್ರತಿದಿನ 150 ಪ್ಯಾಕೆಟ್ ಊಟವನ್ನು ಹಂಚುತ್ತಿದ್ದಾರೆ.
ನಾನು ಸತ್ತರೂ ಇದನ್ನು ಸಾಯಲು ಬಿಡಲ್ಲ: ತನ್ನ ಮಾಸ್ಕ್ ಅನ್ನು ನಾಯಿಗೆ ಹಾಕಿದ ವ್ಯಕ್ತಿಯ ವಿಡಿಯೋ ವೈರಲ್
ಈ ಬಗ್ಗೆ ಮಾತನಾಡಿದ ಅವರು, ಕೊರೋನಾ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ಹಿನ್ನೆಲೆ ನಾನು ಪ್ರತಿದಿನ 150 ಪ್ಯಾಕೆಟ್ ಪಲಾವ್ ಅನ್ನು ಕಳೆದ ಭಾನುವಾರದಿಂದ ನೀಡುತ್ತಿದ್ದೇನೆ. ಪೌಷ್ಟಿಕಯುಕ್ತವಾದ ಆಹಾರವನ್ನು ನೀಡುತ್ತಿದ್ದು, ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ನಿರುದ್ಯೋಗಿಗಳು, ವಲಸೆ ಕಾರ್ಮಿಕರು ಹಾಗೂ ಕುಟುಂಬಕ್ಕೆ ನೀಡುತ್ತಿದ್ದೇನೆ ಎಂದು ಹೇಳಿದರು. ರಂಜಾನ್ನ ಪ್ರಾರಂಭದಲ್ಲಿಯೂ ಸಹ ರೆಸ್ಟೋರೆಂಟ್ನ ಸ್ವಯಂ ಸೇವಕರು ಮಹೀಮ್ ದರ್ಗಾ ಹಾಗೂ ಮಹೀಮ್ ಚರ್ಚ್ ಬಳಿ ಆಹಾರವನ್ನು ನೀಡಿದರು.
ಜಾಗತಿಕವಾಗಿ ಜನರ ಬದುಕನ್ನು ಹೈರಾಣಗೊಳಿಸುತ್ತಿರುವ ಕೋವಿಡ್ -19 ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ವಾರದ ಕೊನೆಯಲ್ಲಿ ಲಾಕ್ಡೌನ್ ಹಾಗೂ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ಈ ಸಂಬಂಧ ಹೊಸ ರೂಲ್ಸ್ ಜಾರಿಗೆ ತಂದಿರುವ ಸರ್ಕಾರ ಸಮರ್ಪಕ ಕಾರಣಗಳಿಲ್ಲದೇ ಜನರು ಸುಖಾಸುಮ್ಮನೆ ಓಡಾಡುವಂತಿಲ್ಲ. ಧಾರಾವಾಹಿ, ಸಿನಿಮಾಗಳ, ಜಾಹೀರಾತುಗಳ ಶೂಟಿಂಗ್ಗೆ ನಿಷೇಧ. ಮದುವೆಯಲ್ಲಿ 25ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಹೇಳಿದೆ.ಮಹಾರಾಷ್ಟ್ರದಲ್ಲಿ ಗುರುವಾರ 61,695 ಪ್ರಕರಣಗಳು ಕಾಣಿಸಿಕೊಂಡಿದೆ. ಇದುವರೆಗೆ 36, 39, 855 ಪ್ರಕರಣಗಳು ದಾಖಲಾಗಿದೆ. ಇದುವರೆಗೆ 59,153 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದೀಗ 6, 20, 060 ಪ್ರಕರಣಗಳು ಸಕ್ರಿಯವಾಗಿವೆ.
ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದು, ಒಂದೇ ದಿನ 14,738 ಹೊಸ ಪ್ರಕರಣಗಳು ದಾಖಲಾಗಿದೆ. 11 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 13,112 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಬುಧವಾರ 11,265 ಮಂದಿಗೆ ಕೊರೋನಾ ಕಂಡು ಬಂದಿತ್ತು, 3,591 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದರು.