ಬೆಂಗಳೂರು: ಪ್ರಾಯೋಗಿಕವಾಗಿ ಹತ್ತು ನಗರಗಳಲ್ಲಿ ಜಾರಿ ಮಾಡಲಾಗಿರುವ ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಗೊಳಿಸಬೇಕೆಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಯುಗಾದಿ ದಿನವೂ ಹಿರಿಯ ಅಧಿಕಾರಿಗಳ ಜೊತೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಪೊಲೀಸ್ ಕಮಿಷನರ್ ಕಮಲ್ ಪಂಥ್, ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೊದಲು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸಭೆ ನಡೆಸಿ, ನಂತರ ಕೋವಿಡ್ ಬಗ್ಗೆಯೂ ಅಧಿಕಾರಗಳ ಜೊತೆ ಚರ್ಚೆ ನಡೆಸಿದ ಸಿಎಂ, ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕುರಿತು ಕ್ಷಣ ಕ್ಷಣದ ಮಾಹಿತಿ ಪಡೆಯಲು ತೀರ್ಮಾನ ಮಾಡಿದರು. ಕೋವಿಡ್ ಲಸಿಕೆ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ನಿರಂತರ ಸಂಪರ್ಕ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಅವಶ್ಯಕತೆಗೆ ಅನುಗುಣವಾಗಿ ಲಸಿಕೆ ಪಡೆಯಬೇಕು. ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಯಾಗಿ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ, ಮೈಕ್ರೋ ಕಂಟೇನ್ಮೆಂಟ್ ಜೋನ್ ಗಳಲ್ಲಿ ಹೆಚ್ಚಿನ ಟೆಸ್ಟ್ ಮಾಡಲು ತಿಳಿಸಿದರು.