ಲಕ್ನೋ : ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಲ್ಲದೇ, ಪ್ರತಿ ದಿನ 50 ಸಾವಿರದ ಗಡಿಯ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಅಲ್ಲಿ ಲಾಕ್ ಡೌನ್ ಘೋಷಣೆಯಾಗಬಹುದು ಎಂಬ ಭಯ ಜನರನ್ನು ಕಾಡುತ್ತಿದೆ.
ಮುಂಬಯಿ ನಗರ ಸೇರಿದಂತೆ ವಿವಿಧ ನಗರದಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಲಾಕ್ ಡೌನ್ ಘೋಷಣೆಯಾಗಬಹುದೆಂಬ ಆತಂಕದಿಂದ ಉತ್ತರ ಪ್ರದೇಶದ ರೈಲುಗಳನ್ನು ಹಿಡಿದು ಮರಳಿ ಹೋಗುತ್ತಿದ್ದಾರೆ. ಗೋರಖ್ ಪುರ, ವಾರಣಾಸಿ, ಪ್ರಯಾಗ್ ರಾಜ್, ಲಕ್ನೋ ಸೇರಿದಂತೆ ಇನ್ನಿತರ ನಗರಗಳ ರೈಲು ನಿಲ್ದಾಣಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಮರಳಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗುತ್ತಿದೆ.
ಮುಂಬಯಿ – ಸುಲ್ತಾನ್ ಪುರ್ ರೈಲಿನ ಮೂಲಕವೇ ಹೆಚ್ಚಿನ ವಲಸಿಗರು ತೆರಳುತ್ತಿದ್ದಾರೆ ಎನ್ನಲಾಗಿದೆ. 45 ವಿಶೇಷ ರೈಲುಗಳಲ್ಲಿ ಶೇ. 80ರಷ್ಟು ಸೀಟ್ ಗಳು ಭರ್ತಿಯಾಗಿದ್ದವು ಎಂದು ರಾಷ್ಟ್ರೀಯ ಮಾಧ್ಯವೊಂದು ವರದಿ ಮಾಡಿದೆ.
ಮುಂಬಯಿ ನಗರವೊಂದರಲ್ಲಿಯೇ ಕಳೆದ 24 ಗಂಟೆಗಳಲ್ಲಿ 6,905 ಹೊಸ ಪ್ರಕರಣ ದಾಖಲಾಗಿವೆ. ಒಟ್ಟು 43 ಜನರು ಮೃತಪಟ್ಟಿದ್ದಾರೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,27,119ಕ್ಕೆ ಏರಿಕೆ ಕಂಡಿದೆ.