ಕೊರೊನಾ ವೈರಸ್ ಹಾವಳಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ಎರಡನೇ ಅಲೆ ಕಾಣಿಸಿಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ, ಬಾಲಿವುಡ್ನಲ್ಲಿ ಸ್ಟಾರ್ ನಟರ ಯಾವುದೇ ಸಿನಿಮಾಗಳು ತೆರೆಕಾಣುತ್ತಿಲ್ಲ. ಈ ವಿಚಾರದ ಬಗ್ಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದು, ಸ್ಟಾರ್ ನಟರು ಈಗಾಗಲೇ ತಲೆಮರಿಸಿಕೊಂಡಿದ್ದಾರೆ. ನನ್ನ ಸಿನಿಮಾದಿಂದ ಬಾಲಿವುಡ್ ಉಳಿದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಬಯೋಪಿಕ್ ‘ತಲೈವಿ’ಯಲ್ಲಿ ಕಂಗನಾ ರಣಾವತ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಟ್ರೇಲರ್ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ಏಪ್ರಿಲ್ 23ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಕಂಗನಾ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
‘ತಲೈವಿ’ ಸಿನಿಮಾ ರಿಲೀಸ್ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಾಲಿವುಡ್ ವ್ಯವಹಾರಗಳ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದರು. ಇದನ್ನು ರಿಟ್ವೀಟ್ ಮಾಡಿರುವ ಕಂಗಾನಾ, ‘ಅವರು ನನ್ನನ್ನು ಇಂಡಸ್ಟ್ರಿಯಿಂದ ಹೊರಹಾಕಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಗ್ಯಾಂಗ್ ಕಟ್ಟಿಕೊಂಡರು, ನನಗೆ ಕಿರುಕುಳ ನೀಡಿದರು. ಆದರೆ, ಇಂದು ಬಾಲಿವುಡ್ ದೊಡ್ಡ ತಲೆಗಳಾದ ಕರಣ್ ಜೋಹರ್ ಮತ್ತು ಆದಿತ್ಯ ಚೋಪ್ರಾ ತಲೆಮರೆಸಿಕೊಂಡಿದ್ದಾರೆ. ಎಲ್ಲಾ ದೊಡ್ಡ ಹೀರೋಗಳು ಕಾಣೆ ಆಗಿದ್ದಾರೆ. ಆದರೆ ಕಂಗನಾ ರಣಾವತ್ ಮತ್ತು ಅವರ ತಂಡ 100 ಕೋಟಿ ಬಜೆಟ್ ಚಿತ್ರದೊಂದಿಗೆ ಬಾಲಿವುಡ್ ಉಳಿಸಲು ಬರುತ್ತಿದೆ ಎಂದಿದ್ದಾರೆ.