ಹಾವೇರಿ: ರಾಜ್ಯದಲ್ಲಿ ಕೋವಿಡ್ ಚರ್ಚೆಗಿಂತಲೂ ಹೆಚ್ಚಾಗಿ ಸಿಡಿ ಕೇಸ್ ಗೆ ಸಂಬಂಧಿಸಿದ ಚರ್ಚೆ ಜೋರಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಸೆಕ್ಸ್ ಸಿಡಿಗೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಈಗಾಗಲೇ ಮಹಾನಾಯಕನ ಹೆಸರು ಬಾಯಿಬಿಟ್ಟಿದ್ದಾಳೆ. ಇದರ ಮಧ್ಯೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ‘ಕಾಂಗ್ರೆಸ್ ಮಹಾನಾಯಕ’ ಮತ್ತು ‘ಬಿಜೆಪಿಯ ಯುವರಾಜ’ ಇವರ ಬಳಿ ಸಿ.ಡಿ. ತಯಾರಿಸುವ ಕಾರ್ಖಾನೆಗಳಿವೆ. ಇವರು ಸಿ.ಡಿ.ಗಳನ್ನೂ ಖರೀದಿ ಮಾಡುತ್ತಾರೆ. ಈಗಾಗಲೇ ಕೆಲವೇ ದಿನಗಳಲ್ಲಿ ‘ಬಿಜೆಪಿ ಯುವರಾಜ’ನ ಹೆಸರು ಹೊರಬರಲಿದೆ’ ಎಂದು ಹೇಳಿದ್ದಾರೆ.
‘ಮಹಾನಾಯಕ ಮತ್ತು ಯುವರಾಜರು ಹೆಣ್ಣುಮಕ್ಕಳನ್ನು ಬಿಟ್ಟು ಕೆಲವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಸಿ.ಡಿ. ಬಿಡುಗಡೆ ಮಾಡುತ್ತೇನೆ ಎಂದು ಹೆದರಿಸುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಎಷ್ಟೋ ಶಾಸಕರು ಈ ಭಯದ ವಾತಾವರಣದಲ್ಲಿದ್ದಾರೆ’ ಎಂದು ಹೇಳಿದರು. ಮಹಾನಾಯಕ ಯಾರೆಂದು ರಿವೀಲ್ ಆಗಿದೆ ಸದ್ಯ ಯುವರಾಜ ಒಬ್ಬ ಜೈಲಿನಲ್ಲಿದ್ದಾನೆ. ಇನ್ನೊಬ್ಬ ಯುವರಾಜ ಹೊರಗಡೆ ಇದ್ದಾನೆ ಎಂದರು. ಆ ಮಹಾನಾಯಕ ಮತ್ತು ಯುವರಾಜ ಯಾರು ಎಂಬ ಬಗ್ಗೆ ಯತ್ನಾಳ ಬಾಯಿಬಿಡಲಿಲ್ಲ.
ಸಿ.ಡಿ. ಪ್ರಕರಣದಲ್ಲಿ ಕೆಲವರನ್ನು ರಕ್ಷಣೆ ಮಾಡಲೆಂದೇ ‘ಸಿಸಿಬಿ ತನಿಖೆ’ಗೆ ವಹಿಸಲಾಗಿದೆ. ‘ಸಿಬಿಐ ತನಿಖೆ’ಗೆ ವಹಿಸಿದ್ದರೆ, ಎಲ್ಲ ಕಳ್ಳರನ್ನು ಒದ್ದು ಒಳಗೆ ಹಾಕುತ್ತಿದ್ದರು. ಇನ್ನೂ ಬಹಳ ಮಂದಿಯ ಸಿ.ಡಿ.ಗಳನ್ನು ಮಾಡಲಾಗಿದೆ. ಇದರಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರು ಸೇರಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ರಾಜ್ಯದಲ್ಲಿ ‘ಭ್ರಷ್ಟ’ ಮತ್ತು ‘ಪ್ರಾಮಾಣಿಕ ರಾಜಕಾರಣಿಗಳು’ ಎಂಬ ಎರಡು ಗುಂಪುಗಳಿವೆ. ಎಂದು ಬೇಸರ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಗಿದೆ ಎಂಬ ಬಗ್ಗೆ ಸದನದಲ್ಲಿ ಚರ್ಚೆ ಮಾಡಬೇಕಾಗಿತ್ತು ಆದರೆ ಸಿ.ಡಿ. ನೆಪ ಮಾಡಿಕೊಂಡು ಸದನವನ್ನು ಹಾಳು ಮಾಡಿದರು ಎಂದು ಕಿಡಿಕಾರಿದರು.