ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀ ಸಿ.ಡಿ ಪ್ರಕರಣದ ಬಗ್ಗೆ ಮೊದಲು ಮಾಹಿತಿ ಕೊಟ್ಟಿದ್ದೇ ನಾನು. ಈ ಪ್ರಕರಣ ಐದು ಕೋಟಿ ರೂ.ಗೆ ಡೀಲ್ ಆಗಿದೆ. ನರೇಶ್ ಗೌಡ ಭಾಗಿಯಾಗಿದ್ದಾನೆ ಎಂದು ಹೆಸರು ಹೇಳಿದ್ದೇ ನಾನು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ(HD Kumaraswamy), ಸಿ.ಡಿ ಪ್ರಕರಣದಲ್ಲಿ ಕೈವಾಡವಿರುವ ಮಹಾನ್ ನಾಯಕ ಯಾರು ಎಂಬುದರ ಬಗ್ಗೆ ನನಗೆ ಮಾಹಿತಿ ಇದೆ ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್( BJP-Congress) ನಡುವಿನ ಟ್ವೀಟ್ ವಾರ್ ರಾಜ್ಯದ ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದು, ಇದಕ್ಕಾಗಿಯೇ ಸುಮ್ಮನಿದ್ದೇನೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು. ಫೋಟೋಗಳನ್ನು ಹಾಕಿಕೊಂಡು ಆರೋಪ-ಪ್ರತ್ಯಾರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಈಗ ರಮೇಶ್ ಜಾರಕಿಹೊಳಿ(Ramesh Jarkiholi) ಸಿ.ಡಿ ಪ್ರಕರಣದಲ್ಲಿ ಎಸ್ಐಟಿಯವರು ಸರಿಯಾದ ದಿಕ್ಕಿನಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ಕೊಡಬೇಕು. ಯಾರಿಗು ಹೆದರದೆ ಸತ್ಯವನ್ನು ರಾಜ್ಯದ ಜನರ ಮುಂದಿಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.