ಬೆಂಗಳೂರು : ನಾನು ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಸಂಬಂಧಿಸಿದ್ದು ಎನ್ನಲಾದಂತ ಸಿಡಿ ಪ್ರಕರಣ ಕುರಿತಂತೆ ದೂರು ವಾಪಾಸ್ ಪಡೆಯಲು ಹಲವಾರು ಕಾರಣಗಳಿದ್ದಾವೆ. ನನ್ನ ವಕೀಲರು ಹೇಳಿದ ಬಳಿಕ, ನಾನು ಠಾಣೆಗೆ ಹೋಗಿ ದೂರು ವಾಪಾಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
ಈ ಕುರಿತಂತೆ ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ನಾನು ಯಾವುದೇ ಒತ್ತಡಗಳಿಗೆ ಮಣಿದು ಆಗಲಿ ರಮೇಶ್ ಜಾರಕಿಹೊಳಿ ವಿರುದ್ಧದ ದೂರು ವಾಪಾಸ್ ಪಡೆದಿಲ್ಲ. ಬದಲಾಗಿ ಮಾನಸಿಕವಾಗಿ ಹಾಗೂ ಹಲವು ಮಾಧ್ಯಮಗಳಲ್ಲಿ ಷಡ್ಯಂತ್ರ ಮಾಡಿದ್ದಾರೆ ಎಂಬ ಗುರುತರ ಆರೋಪದಿಂದ ಮುಕ್ತನಾಗಬೇಕು. ನನ್ನ ಮೇಲಿನ ಟೀಕೆಯಿಂದ ದೂರವಾಗಬೇಕು ಎನ್ನುವ ಕಾರಣದಿಂದಾಗಿ ದೂರು ವಾಪಾಸ್ ಪಡೆದಿರುವುದಾಗಿ ತಿಳಿಸಿದರು.
ಕೆಲವರು ತೆವಲಿಗಾಗಿ ಮಾತನಾಡುತ್ತಾರೆ. ಮಾತನಾಡೋದು ಸುಲಭ, ಆದ್ರೇ ಮಾತಿನಂತೆ ಹೋರಾಟ ಮಾಡೋದು ಕಷ್ಟ. ನನ್ನ ಘನತೆಗೆ ಧಕ್ಕೆಯಾಗಿದ್ದರಿಂದಾಗಿ ಈ ಪ್ರಕರಣದಿಂದ ಹಿಂದೆ ಸರಿದಿದ್ದೇನೆ. ಪೊಲೀಸರು ಮತ್ತೆ ವಿಚಾರಣೆಗೆ ಕರೆದರೇ ಕಾನೂನಾತ್ಮಕವಾಗಿ ಠಾಣೆಗೆ ಹೋಗುತ್ತೇನೆ. ಸುಮೋಟೋ ಕೇಸ್ ದಾಖಲು ಮಾಡುವುದು, ಬಿಡುವುದು ತನಿಖಾಧಿಕಾರಿಗಳಿಗೆ ಬಿಟ್ಟ ವಿಚಾರ ಎಂದರು.