Home / ಜಿಲ್ಲೆ / ರಮೇಶ್ ಜಾರಕಿಹೊಳಿ ಖಾತೆಯ ಮೇಲೆ ಎಲ್ಲರ ಕಣ್ಣು..

ರಮೇಶ್ ಜಾರಕಿಹೊಳಿ ಖಾತೆಯ ಮೇಲೆ ಎಲ್ಲರ ಕಣ್ಣು..

Spread the love

ರಮೇಶ ಜಾರಕಿಹೊಳಿಯಿಂದ ತೆರವಾದ ಜಲಸಂಪನ್ಮೂಲ ಖಾತೆ ಮೇಲೆ ಹಲವು ಸಚಿವರ ಕಣ್
ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆ ಮೇಲೆ ಹಲವು ಸಚಿವರು ಕಣ್ಣಿಟ್ಟಿದ್ದಾರೆ.

ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆ ಬೃಹತ್ ನೀರಾವರಿ ಖಾತೆ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ಸಿಎಂ ಬಳಿ ತಮಗೇ ಖಾತೆ ನೀಡುವಂತೆ ಲಾಬಿ ನಡೆಸಿದ್ದಾರೆ.

ಪ್ರಬಲ ಆಕಾಂಕ್ಷಿಗಳು:

ಮೊದಲಿನಿಂದಲೂ ನೀರಾವರಿ ಖಾತೆ ಮೇಲೆ ಕಣ್ಣಿಟ್ಟಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಮತ್ತಿತರರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಲಸಂಪನ್ಮೂಲ ಖಾತೆ ನೀಡುವಂತೆ ಬೇಡಿಕೆ ಇಟ್ಟಿದ್ದು, ಸಿಎಂ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಹಿಂದೆ ನಾನು ಕೇಳಿದ ಖಾತೆ ನೀಡಲಿಲ್ಲ. ಸಂಪುಟ ಪುನಾರಚನೆ ವೇಳೆಯೂ ಬಯಸಿದ ಖಾತೆ ಸಿಗಲಿಲ್ಲ. ಈಗಲಾದರೂ ಜಲಸಂಪನ್ಮೂಲ ಖಾತೆಯನ್ನು ತನಗೆ ನೀಡಿ ಎಂದು ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ಕಂದಾಯ ಸಚಿವ ಆರ್.ಅಶೋಕ್ ಕೂಡ ತಮಗೆ ಬೃಹತ್ ನೀರಾವರಿ ಖಾತೆಯನ್ನು ನೀಡಿದರೆ ಸಮರ್ಪಕವಾಗಿ ನಿರ್ವಹಿಸುವೆ ಎಂದು ಸಿಎಂ ಬಳಿ ಹೇಳಿಕೊಂಡಿದ್ದಾರೆ.

ಬಾಲಚಂದ್ರಗೆ ಸಚಿವ ಸ್ಥಾನ ಕೊಡಿ:

ಇನ್ನೊಂದೆಡೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಕೊಡುವಂತೆ ಸಚಿವರು ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಎರಡು ದಿನಗಳ ಹಿಂದೆ 15ಕ್ಕೂ ಹೆಚ್ಚು ಶಾಸಕರು ಸಿಎಂ ಬಳಿ ತೆರಳಿ ಬಾಲಚಂದ್ರ ಜಾರಕಿಹೊಳಿಗೆ ಖಾತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಆದರೆ, ಹೈಕಮಾಂಡ್ ಜೊತೆ ಚರ್ಚಿಸದೆ ನಾನು ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.

ರಮೇಶಗೆ ಮತ್ತೆ ಜಲಸಂಪನ್ಮೂಲ ಖಾತೆ ನೀಡಿ:

ಸಿಡಿ ಸಂಪೂರ್ಣ ನಕಲಿಯಾಗಿದೆ. ಈ ಬಗ್ಗೆ ಸಂತ್ರಸ್ಥೆಯಾಗಲಿ ಅಥವಾ ಅವರ ಕುಟುಂಬಸ್ಥರಾಗಲಿ ದೂರು ನೀಡಿಲ್ಲ. ಸಿಡಿ ವಿಚಾರಕ್ಕೆ ಸಂಬಂಧಪಟ್ಟಂತೆ ರಮೇಶ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ್ದ ದೂರನ್ನು ಈಗ ಹಿಂಪಡೆದಿದ್ದಾರೆ. ಹೀಗಾಗಿ, ಎಫ್ಎಸ್ಎಲ್ ವರದಿ ಬಂದ ಕೂಡಲೇ ಸತ್ಯಾಸತ್ಯತೆ ಅರಿತು, ರಮೇಶಗೆ ಮತ್ತೆ ಜಲಸಂಪನ್ಮೂಲ ಖಾತೆ ನೀಡಬೇಕು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ರಮೇಶ ಸಹೋದರ ಬಾಲಚಂದ್ರ ಒತ್ತಾಯಿಸಿದ್ದಾರೆ.

ಒಂದು ಮೂಲದ ಪ್ರಕಾರ ಬೆಳಗಾವಿ ಲೋಕಸಭಾ ಉಪಚುನಾವಣೆ ಮುಗಿಯುವವರೆಗೂ ಸದ್ಯಕ್ಕೆ ಈ ಖಾತೆಯನ್ನು ಯಾರಿಗೂ ನೀಡದೆ ತಮ್ಮ ಬಳಿಯೇ ಉಳಿಸಿಕೊಳ್ಳಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಯಾರಿಗೆ ನೀಡಿದರೂ ಅಸಮಾಧಾನ ಉಂಟಾಗಬಹುದೆಂಬ ಕಾರಣಕ್ಕಾಗಿ ಯಡಿಯೂರಪ್ಪ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ