ಬೆಂಗಳೂರು,ಮಾ.9-ಮಾಧ್ಯಮಗಳ ಮುಂದೆ ಸಿ.ಡಿ ಇವೆ ಎಂದು ಹೇಳಿಕೆ ನೀಡುವವರನ್ನು ರಾಜ್ಯ ಸರ್ಕಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಬಂಧಿಸಬೇಕಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ ಪ್ರಕರಣದಂತಹ ವಿಷಯವನ್ನು ಮುಂದಿಟ್ಟುಕೊಂಡು ನಮ್ಮ ಕುಟುಂಬ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವುದಾಗಲಿ ಅಥವಾ ಇನ್ನೊಬ್ಬರ ತೇಜೋವಧೆಗೆ ಕೈಹಾಕಿಲ್ಲ. ನಮ್ಮ ತಂದೆಯವರ ಕಾಲದಿಂದಲೂ ಇಂಥ ಕೆಲಸ ಮಾಡಿಲ್ಲ ಎಂದರು.ನಾಲ್ಕು ಗೋಡೆ ಮಧ್ಯೆ ನಡೆದಿರುವುದನ್ನು ದಾಖಲಿಸಿ ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಕಾನೂನು ಬಾಹಿರವಲ್ಲವೇ? ಆ ಸಿ.ಡಿ ಅಸಲಿಯೋ, ನಕಲಿಯೋ ಆದರೆ ತೇಜೋವಧೆಯಂತೂ ಆಗಿದೆಯಲ್ಲವೇ? ಸಿ.ಡಿ ಪ್ರಕರಣದಂತಹ ತೇಜೋವಧೆಯಾಗುವುದನ್ನು ತಡೆಯಲು ಏನು ಕಾನೂನು ತರುತ್ತಾರೋ ತರಲಿ. ಕಾನೂನು ರಚನೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುವುದಿಲ್ಲ. ತಪ್ಪುಗಳಾದಾಗ ಸರಿಪಡಿಸಿಕೊಂಡು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿರುವುದು ಬಾಂಬೆಗೆ ಕರೆದುಕೊಂಡು ಹೋದ ಇಬ್ಬರು, ಬಾಂಬೆಯಲ್ಲಿ ನೋಡಿಕೊಂಡವರು ಮೂರು ಜನರೋ? ಅಲ್ಲಿಂದ ಕರೆದುಕೊಂಡು ಬಂದವರು ನಾಲ್ಕು ಜನವೋ ಗೊತ್ತಿಲ್ಲ. ಅವರನ್ನೇ ಕೇಳಬೇಕು. ಸಿ.ಡಿ ಪ್ರಕರಣದಲ್ಲಿ ನೂರಾರು ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಜಾರಕಿಹೊಳಿ ಅವರೇ ಆಪಾದಿಸಿದ್ದಾರಲ್ಲವೇ? ಎಂದರು.
ಇಂತಹ ಪರಿಸ್ಥಿತಿ ನಿರ್ಮಾಣಕ್ಕಾಗಿ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಹೋಗಬೇಕಿತ್ತೇ? ಬಿಜೆಪಿಗೆ ಸೇರಬೇಕಿತ್ತೆ? ಎಂದು ಪ್ರಶ್ನಿಸಿದರು. ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ತಾವು ಕೈ ಹಾಕಲಿಲ್ಲ. ಆ ಸಂದರ್ಭದಲ್ಲಿ ಅಮೇರಿಕ ಪ್ರವಾಸದಲ್ಲಿದ್ದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಅಸಮಾಧಾನಿತ ಶಾಸಕರು ಗೋವಾ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಇದ್ದರು. ಆಗ ಯಾಕೆ ಸಿ.ಡಿ ಬರಲಿಲ್ಲ ಎಂದರು.
ಸಿ.ಡಿ ಪ್ರಕರಣದಿಂದ ಸಂತ್ರಸ್ತರಾದವರು ಯಾರು? ಸಿ.ಡಿ ಪ್ರಕರಣ ಬೆಳಕಿಗೆ ಬಂದು 6 ದಿನವಾದರೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕಿತ್ತಲ್ಲವೇ? ಸಿ.ಡಿ ಪ್ರಕರಣ ಅಸಲಿಯೋ, ನಕಲಿಯೋ ಸಂತ್ರಸ್ತರಾದವರೂ ಯಾರು ಎಂದು ಪ್ರಶ್ನಿಸಿದರು. ತಮ್ಮ ವಿರುದ್ಧ ಮಾನಹಾನಿಯಂತಹ ಸುದ್ದಿಗಳನ್ನು ಬಿತ್ತರಸಬಾರದೆಂದು ನ್ಯಾಯಲಯದ ಮೊರೆ ಹೋಗಿರುವವರು ಮೇಧಾವಿಗಳು ಎಂದು ವ್ಯಂಗ್ಯವಾಡಿದರು.