ಬೆಂಗಳೂರು,ಮಾ.9- ಪಡಿತರ ಅಂಗಡಿಗಳ ಮೂಲಕ ಆದ್ಯತಾ ಪಡಿತರಚೀಟಿಗಳಿಗೆ ಸದ್ಯಕ್ಕೆ ಉಚಿತವಾಗಿ ಅಕ್ಕಿ, ಗೋಧಿ ಹಾಗೂ ಆಹಾರ ಧಾನ್ಯವನ್ನು ನೀಡಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಇದಕ್ಕೆ ಹಣ ಪಡೆದು ಗುಣಮಟ್ಟದ ಆಹಾರ ಒದಗಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.ವಿಧಾನಪರಿಷತ್ನ ಪ್ರಶ್ನೋತ್ತರ ಅವಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 10,90,951 ಅಂತ್ಯೋದಯ ಅನ್ನ ಪಡಿತರ ಚೀಟಿಗಳು, 1,16,83,545 ಆದ್ಯತಾ ಪಡಿತಚೀಟಿಗಳು ಸೇರಿ 1.27 ಕೋಟಿ ಪಡಿತರಚೀಟಿಗಳಿವೆ. ಅಂತ್ಯೋದಯ ಅನ್ನ ಪಡಿತರ ಚೀಟಿದಾರರಿಗೆ 35 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಆದ್ಯತಾ ಪಡಿತರಚೀಟಿದಾರರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ನೀಡುತ್ತಿದ್ದೇವೆ. ಹಿಂದಿನ ಸರ್ಕಾರದಂತೆ ಉಚಿತವಾಗಿ ಪಡಿತರವನ್ನು ಪರಿಪಾಠವನ್ನು ಮುಂದುವರೆಸಿದ್ದೇವೆ. ಸದ್ಯಕ್ಕೆ ಇದಕ್ಕೆ ಹಣ ಪಡೆಯುವ ಪ್ರಸ್ತಾವನೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಗಾಗಿ ದರ ನಿಗದಿ ಮಾಡಲು ಪರಿಶೀಲಿಸಲಾಗುವುದು ಎಂದರು.
ಸರ್ಕಾರದಿಂದ ಅನುದಾನ ಪಡೆಯುತ್ತಿರುವ ನೌಕರರು, 3 ಹೆಕ್ಟೇರ್ ಒಣ ಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು ಸಾವಿರ ಚ.ದ. ಅಡಿ ಹೆಚ್ಚಿನ ವಿಸ್ತೀರ್ಣವುಳ್ಳ ಪಕ್ಕಾ ಮನೆ ಹೊಂದಿರುವ ಕುಟುಂಬದವರು, ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್ ಹೊರತುಪಡಿಸಿ ಸ್ವಂತ ಬಳಕೆಗಾಗಿ ನಾಲ್ಕು ಚಕ್ರ ಹೊಂದಿರುವವರು, ಹಾಗೂ 1.20 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳನ್ನು ಬಿಪಿಎಲ್ ಪಟ್ಟಿಯಿಂದ ಹೊರಗಿಡಲಾಗಿದೆ.ಈವರೆಗೂ 2,28,188 ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆಹಚ್ಚಿ ರದ್ದುಪಡಿಸಲಾಗಿದೆ. ಅವರಿಂದ 3.07ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ಬಿಪಿಎಲ್ ಮಾನದಂಡಗಳನ್ನಾಗಲಿ ಅಥವಾ ಬೇರೆ ಯಾವುದೇ ಹೊಸ ತಿದ್ದುಪಡಿಗಳನ್ನು ನಾವು ರೂಪಿಸಿಲ್ಲ. 2017ರಲ್ಲಿ ಸಿದ್ದರಾಮಯ್ಯ ಸರ್ಕಾರ ರೂಪಿಸಿದ ನಿಯಮಗಳನ್ನೇ ಮುಂದುವರೆಸಿದ್ದೇವೆ. ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಯಿದೆ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡುವವರಿಗೆ ದಿನವೊಂದಕ್ಕೆ 272 ರೂ. ಕೂಲಿ ನೀಡುತ್ತಿದ್ದೇವೆ.
ಆ ಒಟ್ಟು ಆದಾಯವನ್ನು ಲೆಕ್ಕ ಹಾಕಿ ವಾರ್ಷಿಕ ಆದಾಯ ಮಿತಿಯನ್ನು ಪರಿಷ್ಕರಣೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದರು.
ಜೆಡಿಎಸ್ ಶಾಸಕ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲಾಗಿರುವ ಭತ್ತಕ್ಕೆ 93 ಕೋಟಿ ಬಾಕಿ ಪಾವತಿಸಬೇಕು ಮತ್ತು 5.93 ಲಕ್ಷ ಹಲ್ಲಿಂಗ್ ಹಣವನ್ನು ಗಿರಣಿ ಮಾಲೀಕರಿಗೆ ಪಾವತಿಸಬೇಕಿದೆ.
ಈ ಹಲ್ಲಿಂಗ್ ಮೊತ್ತವನ್ನು ವಾರದೊಳಗೆ ಪಾವತಿಸಲಾಗುವುದು. ಉಳಿದಂತೆ 93 ಕೋಟಿ ರೂ.ಗಳನ್ನು ಮಾರ್ಚ್ ಅಂತ್ಯದೊಳಗೆ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.ಖರೀದಿ ಮಾಡಲಾದ ಭತ್ತವನ್ನು ದಾಸ್ತಾನು ಮಾಡಲು ಸರ್ಕಾರ ಗೋದಾಮುಗಳನ್ನು 5 ತಿಂಗಳವರೆಗೆ ಬಾಡಿಗೆ ಪಡೆದಿತ್ತು. ಈಗ 8 ತಿಂಗಳವರೆಗೂ ಭತ್ತವನ್ನು ದಾಸ್ತಾನು ಮಾಡುವ ಪರಿಸ್ಥಿತಿ ಬಂದಿದೆ.
ಬಾಕಿ 3 ತಿಂಗಳ ಬಾಡಿಗೆಯನ್ನು ಗಿರಣಿ ಮಾಲೀಕರು ನೀಡಬೇಕೆಂದು ಅಕಾರಿಗಳು ಹೇಳುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ ಅವರು, ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಸರ್ಕಾರದಿಂದ ಬಾಕಿ ಬಾಡಿಗೆಯನ್ನು ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಸದಸ್ಯರಾದ ಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕತ್ತಿ ಅವರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ 786 ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, 63,637 ಕ್ವಿಂಟಾಲ್ ಅಕ್ಕಿ, 773 ಕ್ವಿಂಟಾಲ್ ಗೋ, 1.2 ಕ್ವಿಂಟಾಲ್ ಸಕ್ಕರೆ, 630 ಕ್ವಿಂಟಾಲ್ ರಾಗಿ,29 ಕ್ವಿಂಟಾಲ್ ತೊಗರಿಬೇಳೆ ಕಾಳುಗಳನ್ನು ವಶಪಡಿಸಿಕೊಳ್ಲಲಾಗಿದೆ ಎಂದು ತಿಳಿಸಿದ್ದರೆ.
ಇದರಲ್ಲಿ ಬೀದರ್, ಕಲಬುರಗಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಕ್ರಮವಾಗಿ ದಾಸ್ತಾನಾಗಿರುವುದ ಪತ್ತೆಯಾಗಿದ. ಅಂಗಡಿದಾರರು, ದಾಸ್ತಾನುದಾರರು ಮತ್ತು ಅಕಾರಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದಮ್ಮೆಗಳನ್ನು ದಾಖಲಿಸಲಾಗಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
ಪಡಿತರಚೀಟಿದಾರರಿಗೆ ನೀಡುತ್ತಿರುವ ಅಕ್ಕಿಯ ಪ್ರಮಾಣದ ಬಗ್ಗೆ ಹರಿಪ್ರಸಾದ್ ಅವರು ಪ್ರಶ್ನಿಸಿದಾಗ, ಲಾಕ್ಡೌನ್ ವೇಳೆ ಎಲ್ಲರಿಗೂ ಆಹಾರಧಾನ್ಯದ ಸಮಾನ ಹಂಚಿಕೆಯಾಗಬೇಕು ಎಂಬ ಕಾರಣಕ್ಕಾಗಿ 7 ಕೆಜಿ ಬದಲಾಗಿ 5 ಕೆಜಿ ಅಕ್ಕಿಯನ್ನು ಹಂಚಿಕೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.