ಪಿರಿಯಾಪಟ್ಟಣ: ಕೃಷಿ ಕಾಯ್ದೆ ಜಾರಿ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಹಿಂದೆ ವಿರೋಧ ಪಕ್ಷಗಳ ಷಡ್ಯಂತ್ರವಿದೆ ಎಂದು ರಾಜ್ಯಸಭಾ ಸದಸ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಆರೋಪಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮದ ಪ್ರಗತಿಪರ ರೈತ ಸುಪ್ರೀತ್ ಅವರ ತೋಟದ ಜಮೀನಿನಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ರೈತರೊಂದಿಗಿನ ಸಂವಾದ ಹಾಗೂ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕಾಏಕಿ ಕೃಷಿ ಕಾಯ್ದೆ ಜಾರಿ ಮಾಡಿಲ್ಲ, ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಕೃಷಿ ಕಾಯ್ದೆ ತಿದ್ದುಪಡಿ ತರುವುದಾಗಿ ಹೇಳಿದ್ದಕ್ಕೆ ದನಿಗೂಡಿಸಿದ್ದ ರಾಹುಲ್ ಗಾಂಧಿ ಅಂದಿನ ಕೇಂದ್ರ ಸಚಿವ ಶರದ್ ಪವಾರ್ ಪಂಜಾಬ್ ಮುಖ್ಯಮಂತ್ರಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ದನಿಗೂಡಿಸಿದ್ದರು, 2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದ್ದ ಕೃಷಿ ಕಾಯ್ದೆ ತಿದ್ದುಪಡಿಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡಿರುವುದರಿಂದ ಕಾಂಗ್ರೆಸ್ಸಿಗರೇ ಇದಕ್ಕೆ ಉತ್ತರ ನೀಡಬೇಕು, ರೈತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶದಂತೆ ತಜ್ಞರ ಸಮಿತಿ ರಚಿಸಿ ಹೋರಾಟಗಾರರನ್ನು ಸಭೆಗೆ ಆಹ್ವಾನಿಸಿದ್ದರೂ ಅವರು ಬಾರದ ಹಿನ್ನೆಲೆ ವಿರೋಧಿಗಳ ಕೈವಾಡವಿದ್ದು ನಿಜವಾದ ರೈತರು ಹೋರಾಟದಲ್ಲಿ ತೊಡಗಿಸಿಕೊಳ್ಳದೆ ತಮ್ಮ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಕೊರೋನಾ ಸಂಕಷ್ಟ ಕಾಲದಲ್ಲಿ ಲಾಕ್ ಡೌನ್ ಹಿನ್ನೆಲೆ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಅದನ್ನು ಮೆಟ್ಟಿ ನಿಂತ ರೈತರ ಪರಿಶ್ರಮದಿಂದ ಆಹಾರ ಉತ್ಪಾದನೆ ಹೆಚ್ಚಾಗಿರುವುದು ಸಂತಸದ ವಿಷಯ, ವಿಜ್ಞಾನಿಗಳಿಗಿಂತ ಹೆಚ್ಚು ಹೊಸ ಹೊಸ ಪ್ರಯೋಗ ಮಾಡುವ ರೈತರೇ ಶ್ರೇಷ್ಠರು, ವಿಜ್ಞಾನಿಗಳು ಸಂಬಳ ಪಡೆದು ಹೊಸ ಪ್ರಯೋಗಗಳಿಗೆ ಮುಂದಾದರೆ ರೈತರು ತಮ್ಮಲ್ಲಿನ ನೈಪುಣ್ಯತೆ ಮೂಲಕ ಹೊಸ ಆವಿಷ್ಕಾರ ಕೃಷಿ ಪದ್ದತಿಯಿಂದ ಆರ್ಥಿಕವಾಗಿ ಸಬಲ ಆಗುತ್ತಿರುವುದು ಹೆಮ್ಮೆಯ ವಿಷಯ ಎಂದರು.