ಶಿವಮೊಗ್ಗ (ಫೆಬ್ರವರಿ 23); ಇತ್ತೀಚಿನ ದಿನಗಳಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಯಡಿಯೂರಪ್ಪ ವಿರುದ್ದ ಒಂದರ ಹಿಂದೊಂದರಂತೆ ಹೇಳಿಕೆ ನೀಡುತ್ತಲೇ ಇದ್ದಾರೆ. ಇದರಿಂದ ಪಕ್ಷದ ಒಳಗೆ ಮುಜುಗರದ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ಬಿಜೆಪಿ ಹಿರಿಯ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ, ಶಾಸಕ ಯತ್ನಾಳ್ಗೆ ನೊಟೀಸ್ ಸಹ ಜಾರಿ ಮಾಡಿದ್ದಾರೆ. ಈ ಕುರಿತು ಇಂದು ಶಿವಮೊಗ್ಗ ದಲ್ಲಿ ಮಾತನಾಡಿರುವ ಸಚಿವ ಕೆ.ಎಸ್. ಈಶ್ವರಪ್ಪ, “ಯತ್ನಾಳ್ ಅವರು ಸಿಎಂ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದಕ್ಕೆ ನಾನು ಒಪ್ಪಲ್ಲ. ಅವರು ಒಂದು ಪ್ರಕಾರದ ಹಿಂದೂತ್ವವಾದಿ, ಅದಕ್ಕೆ ನಾನು ಖುಷಿ ಪಡುತ್ತೇನೆ. ಆದರೆ, ಅವರು ಪಕ್ಷದ ಶಿಸ್ತಿನ ಒಳಗೆ ಇದ್ದರೆ ಒಳ್ಳೆಯದು” ಎಂದು ಸಲಹೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿ.ಎಸ್. ಯಡಿಯೂರಪ್ಪ ಬಿಕ್ಕಟ್ಟಿನ ಕುರಿತು ಮಾತನಾಡಿರುವ ಸಚಿವ ಈಶ್ವರಪ್ಪ, “ಯತ್ನಾಳ್ ಬಗ್ಗೆ ಏನು ಕ್ರಮ ತೆಗೆದು ಕೊಳ್ಳಬೇಕು? ಎಂಬ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕಳುಹಿಸಿ ಕೊಡಲಾಗಿದೆ. ಕೇಂದ್ರದ ನಾಯಕರು ಅವರಿಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಯತ್ನಾಳ್ ಉತ್ತರ ಸಹ ನೀಡಿದ್ದಾರೆ. ಕೇಂದ್ರದ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.