ಬೆಂಗಳೂರು (ಫೆ. 23): ಶಿವಮೊಗ್ಗದ ಭದ್ರಾವತಿ ಬಳಿ ಜಿಲೆಟಿನ್ ಸ್ಫೋಟಗೊಂಡ ದುರಂತ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟಗೊಂಡು 6 ಜನರು ಸಾವನ್ನಪ್ಪಿದ್ದಾರೆ.
ಈ ಪ್ರಕರಣಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿ, ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಈಗಾಗಲೇ ಈ ಪ್ರಕರಣದ ತನಿಖೆ ನಡೆಸುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ. ನಿನ್ನೆ ರಾತ್ರಿ 12.30ಕ್ಕೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಟೀಕಿಸಿರುವ ಕಾಂಗ್ರೆಸ್, ಈ ದುರಂತಕ್ಕೆ ಸಚಿವ ಡಾ. ಕೆ. ಸುಧಾಕರ್ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗದ ಜಿಲೆಟಿನ್ ಸ್ಫೋಟದ ಆಘಾತ ಮಾಸುವ ಮೊದಲೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಇದು ಬಹಳ ಆಘಾತಕಾರಿಯಾದ ಸಂಗತಿ. ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಶಿವಮೊಗ್ಗದ ಸ್ಫೋಟದ ನಂತರವೂ ಎಚ್ಚೆತ್ತುಕೊಳ್ಳದ ಸರ್ಕಾರ, ಅಕ್ರಮ ಕಲ್ಲು ಕ್ವಾರಿಗಳಿಗೆ, ಅಕ್ರಮ ಸ್ಫೋಟಕಗಳಿಗೆ ಕಡಿವಾಣ ಹಾಕುವ ಬದಲು ಬೆಂಬಲವಾಗಿದ್ದರ ಪರಿಣಾಮ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಸಂಭವಿಸಿದೆ.
ಶಿವಮೊಗ್ಗದಂತೆ ಇಲ್ಲೂ ಅಕ್ರಮಗಳ ಹಿಂದೆ ಬಿಜೆಪಿಗರೇ ಇದ್ದಾರೆ.
ಈ ದುರಂತಕ್ಕೆ ಸಚಿವ @mla_sudhakar ನೇರ ಹೊಣೆ
— Karnataka Congress (@INCKarnataka) February 23, 2021