ಗದಗ: ”ಗೋವಾದಲ್ಲಿ ನಿಮ್ಮದೇ ಮಿತ್ರಪಕ್ಷದ ಸರ್ಕಾರವಿದೆ. ಮಹದಾಯಿ ಯೋಜನೆಗೆ ಒಪ್ಪಿಗೆ ಕೊಡಿಸಿ. ಗೋವಾದ ಒಪ್ಪಿಗೆ ತೆಗೆದುಕೊಂಡು ಬನ್ನಿ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಪ್ರತಿಸವಾಲು ಹಾಕಿದರು.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಐದೇ ನಿಮಿಷದಲ್ಲಿ ಅನುಮೋದನೆ ಪಡೆಯುವುದಾಗಿ ಹೇಳಿರುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಗದಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಹೆಚ್.ಕೆ.ಪಾಟೀಲ್, ”ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ. ಅಂತಾರಾಜ್ಯ ಜಲ ವಿವಾದ ಕಾಯ್ದೆಯಡಿ ಕಾನೂನಾತ್ಮಕವಾಗಿ ಕೇಂದ್ರಕ್ಕೆ ಆದೇಶಿಸುವ ಅಧಿಕಾರವಿದೆ” ಎಂದು ತಮಿಳುನಾಡಿನ ಡಿಎಂಕೆಯ ಒಪ್ಪಿಗೆಗಾಗಿ ಒತ್ತಾಯಿಸುವ ಕುಮಾರಸ್ವಾಮಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.”ತಮಿಳುನಾಡನ್ನು ಒಪ್ಪಿಸುವ ಜವಾಬ್ದಾರಿ ಕುಮಾರಸ್ವಾಮಿಯವರಿಗೆ ಯಾಕೆ? ಅವರ ಒಪ್ಪಿಗೆಯ ಅಗತ್ಯವೇ ಇಲ್ಲ. ಕೇಂದ್ರ ಸರ್ಕಾರಕ್ಕೆ ಆದೇಶ ಮಾಡಲು ಸಾಧ್ಯವಿಲ್ಲವೇ? ಅಂತಾರಾಜ್ಯ ಜಲ ಕಾಯ್ದೆಯಡಿ ಕಾನೂನು ರೀತಿಯಲ್ಲಿ ಎಲ್ಲವನ್ನೂ ಮಾಡಲಾಗಿದೆ. ಒಪ್ಪಿಗೆ ತರಬೇಕೆಂಬ ವಿಷಯ ಕಾಯ್ದೆಯಲ್ಲಿ ಎಲ್ಲಿದೆ?” ಎಂದು ಪಾಟೀಲ್ ಪ್ರಶ್ನಿಸಿದರು.
Laxmi News 24×7