ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ವೇಶ್ಯೆ ಸೋಗಿನಲ್ಲಿ ಗಿರಾಕಿಗಳ ಮನೆಗೆ ಕಳುಹಿಸಿ, ದಿನಕ್ಕೆ 1.5 ಲಕ್ಷ ಹಣ ಪೀಕುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 3 ವರ್ಷದಿಂದ ಹಲವು ಯುವಕರಿಗೆ ಗಾಳ ಹಾಕಿದ್ದ ಈ ದಂಪತಿ, ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಉಲ್ಲಾಳ ಉಪನಗರ ವಿಶ್ವೇಶ್ವರ ಲೇಔಟ್ನ ಭಾಸ್ವತಿ ದತ್ತಾ (26) ಮತ್ತು ಕಿರಣ್ ರಾಜ್ (33) ಬಂಧಿತ ದಂಪತಿ. ನಾಗಮಂಗಲದ ಕಿರಣ್ ಮತ್ತು ಪಶ್ಚಿಮ ಬಂಗಾಳದ ಭಾಸ್ವತಿ ದತ್ತಾ 2018ರಂದು ಪರಿಚಯ ಆಗಿ ಒಟ್ಟಿಗೆ ನೆಲೆಸಿದ್ದರು. ಸುಲಭವಾಗಿ ಹಣ ಮಾಡಲು ಹನಿಟ್ರ್ಯಾಪ್ ಮಾರ್ಗವನ್ನ ಕಂಡು ಕೊಂಡ ಈ ದಂಪತಿ, ಲೊಕೆಂಟೋ.ಕಾಂ ವೆಬ್ಸೈಟ್ನಲ್ಲಿ ಎಸ್ಕಾರ್ಟ್ ಸವಿರ್ಸ್ನಲ್ಲಿ ಯುವತಿ ಭಾವಚಿತ್ರ ಮತ್ತು ಮೊಬೈಲ್ ನಂಬರ್ ಅಪ್ಲೋಡ್ ಮಾಡಿ ಜಾಹೀರಾತು ನೀಡಿದ್ದರು. ವೆಬ್ಸೈಟ್ನಲ್ಲಿ ನೋಡಿದಾಗ ನೂರಾರು ಯುವತಿಯರ ಫೋಟೋಗಳು ಬರುತ್ತಿದ್ದವು. ಅದರಲ್ಲಿ ಗಿರಾಕಿಗಳು ಆಯ್ಕೆ ಮಾಡಿ ಸವಿರ್ಸ್ ಎಂಬ ಬಟನ್ ಒತ್ತಿದಾಗ ಈ ದಂಪತಿ ಮೊಬೈಲ್ಗೆ ಕರೆ ಬರುತ್ತಿತ್ತು. ಕರೆ ಸ್ವೀಕರಿಸುತ್ತಿದ್ದ ದಂಪತಿ, ‘ನೀವು ಆಯ್ಕೆ ಮಾಡುವ ಯುವತಿಯನ್ನು ಮನೆಗೆ ಕಳುಹಿಸುವುದಾಗಿ’ ಹೇಳುತ್ತಿದ್ದರು. ಅದಕ್ಕೆ ಒಪ್ಪಿದಾಗ ಭಾಸ್ವತಿ ದತ್ತಾ, ಗಿರಾಕಿಗಳು ಹೇಳಿದ ವಿಳಾಸಕ್ಕೆ ತಾನೇ ಕ್ಯಾಬ್ ಮಾಡಿಕೊಂಡು ಹೋಗುತ್ತಿದ್ದಳು.
ಗಿರಾಕಿಯ ಮನೆಗೆ ವೇಶ್ಯೆ ಸೋಗಿನಲ್ಲಿ ಹೋಗುತ್ತಿದ್ದ ಭಾಸ್ವತಿ, ರೂಂ ಒಳಗೆ ಅನ್ಯೂನ್ಯವಾಗಿ ಇರಬೇಕಾದ ಸಮಯಕ್ಕೆ ಸರಿಯಾಗಿ ಜೋರಾಗಿ ಕಿರುಚುತ್ತಿದ್ದಳು. ನೀನು ಅತ್ಯಾಚಾರ ಎಸಗಲು ಬಂದಿದ್ದೀಯಾ ಎಂದು ದೂರು ಕೊಡುವುದಾಗಿ ಸುಳ್ಳು ಆರೋಪ ಮಾಡಿ ಬೆದರಿಕೆವೊಡ್ಡಿ ಹಣ, ಚಿನ್ನಾಭರಣ ಸುಲಿಗೆ ಮಾಡುತ್ತಿದ್ದಳು.
ಕಿರಣ್ ರಾಜ್ ಮತ್ತು ಭಾಸ್ವತಿ ದತ್ತಾ
ಇತ್ತೀಚೆಗೆ ವೈಟ್ಫೀಲ್ಡ್ನ ಯುವಕನ ಮನೆಗೆ ಬಂದು ಬೆದರಿಕೆ ಒಡ್ಡಿ ಆತನಿಂದ ಆನ್ಲೈನ್ನಲ್ಲಿ 94 ಸಾವಿರ ರೂ. ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಳು. ಇಷ್ಟು ಹಣ ಸಾಕಾಗುವುದಿಲ್ಲ ಎಂದು ಮನೆಯಲ್ಲಿದ್ದ 150 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಳು.
ಮತ್ತೆ ಹಣಕ್ಕಾಗಿ ಕರೆ ಮಾಡಿ ಬ್ಲಾಕ್ಮೇಲ್ ಮಾಡಿದ್ದಳು. ನೊಂದ ಯುವಕ ಕೊಟ್ಟ ದೂರಿನ ಮೇರೆಗೆ ಆರೋಪಿಗಳ ಮೊಬೈಲ್ ಸಿಗ್ನಲ್ ಜಾಡು ಆಧರಿಸಿ ದಂಪತಿಯನ್ನ ಬಂಧಿಸಲಾಗಿದೆ. ಬಂಧಿತ ಭಾಸ್ವತಿ ಮತ್ತು ಕಿರಣ್ ದಂಪತಿ 2018ರಿಂದ ಹನಿಟ್ರ್ಯಾಪ್ನಲ್ಲಿ ತೊಡಗಿದ್ದರು. 2018, 2019 ಮತ್ತು 2020ರಲ್ಲಿ ಇವರ ಬಲೆಗೆ ಸಿಲುಕಿರುವ ಪ್ರತಿಯೊಬ್ಬರ ಮೊಬೈಲ್ ನಂಬರ್, ವಿಳಾಸ, ಅಶ್ಲೀಲ ವಿಡಿಯೋ, ಪೋಟೋಗಳ ಮಾಹಿತಿಯನ್ನ ಪೊಲೀಸರು ಸಂಗ್ರಹಿಸಿದ್ದಾರೆ.
ಪ್ರತಿಯೊಬ್ಬರಿಗೆ ಆಗಿದ್ದಾಂಗೇ ಕರೆ ಮಾಡಿ ಇನ್ನಷ್ಟು ಹಣ ಕೊಡಬೇಕು. ಇಲ್ಲವಾದರೆ ವಿಡಿಯೋ, ಫೋಟೋಗಳನ್ನು ವೈರಲ್ ಮಾಡಿ ನಿಮ್ಮ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಲಾಗುವುದು ಎಂದು ಬ್ಲಾಕ್ಮೇಲ್ ಮಾಡಿ ದಿನಕ್ಕೆ ಅಂದಾಜು ಒಂದೂವರೆ ಲಕ್ಷ ರೂ. ಸಂಗ್ರಹಿಸುತ್ತಿದ್ದರು.
ಬಂಧಿತ ದಂಪತಿಯ ಡೈರಿಯನ್ನ ಜಪ್ತಿ ಮಾಡಲಾಗಿದ್ದು, ಇಲ್ಲಿಯವರೆಗೂ ಯಾರಿಂದ ಎಷ್ಟು ಹಣ ಸುಲಿಗೆ ಮಾಡಲಾಗಿದೆ, ಇನ್ನೂ ಎಷ್ಟು ಮಾಡಬೇಕೆಂದು ಬರೆದಿರುವ ಮಾಹಿತಿ ಸಿಕ್ಕಿದೆ. ಬ್ಯಾಂಕ್ ಪಾಸ್ಬುಕ್ ಜಪ್ತಿ ಮಾಡಿದ್ದು, ಅದರಲ್ಲಿ ಯಾರಿಂದ ಎಷ್ಟು ಹಣ ಬಂದಿದೆ ಎಂದು ಗೊತ್ತಾಗಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಇಂದಿರಾನಗರದಲ್ಲಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ವೈಟ್ಫೀಲ್ಡ್ ವಿಭಾಗ ಡಿಸಿಪಿ ಡಿ. ದೇವರಾಜ್ ತಿಳಿಸಿದ್ದಾರೆ. ವೆಬ್ಸೈಟ್ನಲ್ಲಿ ಬರುವ ಮೊಬೈಲ್ ನಂಬರ್ಗಳಿಗೆ ಕರೆ ಮಾಡಿ ವಂಚನೆಗೆ ಒಳಗಾಗಬೇಡಿ. ಜಾಲತಾಣದಲ್ಲಿ ಅಪರಿಚಿತರ ಜತೆ ವ್ಯವಹರಿಸುವಾಗ ಎಚ್ಚರ ಎಂದು ಡಿ.ದೇವರಾಜ್ ತಿಳಿಸಿದ್ದಾರೆ.