ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಸದ್ಯ ಸಿನಿಮಾರಂಗದಿಂದ ದೂರ ಉಳಿದ್ದರೂ ಸಹ ಆಗಾಗ ಸುದ್ದಿಯಲ್ಲಿರುತ್ತಾರೆ. ತನ್ನ ಮಾವನ ಜೊತೆ ರಾಜಕೀಯ ಕೆಲಸಗಳಲ್ಲಿ ಗುರುತಿಸಿಕೊಳ್ಳುವ ಅಮೂಲ್ಯ ಆಗಾಗ ರಾಜಕೀಯ ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಮದುವೆ ಬಳಿಕ ಅಮೂಲ್ಯ ಮತ್ತೆ ಬಣ್ಣ ಹಚ್ಚಿಲ್ಲ.
ಅಮೂಲ್ಯ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿಬಂದರೂ ಸಹ ಇದುವರೆಗೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಪತಿ, ಸಂಸಾರ ಅಂತ ಸಂತೋಷದ ಜೀವನ ನಡೆಸುತ್ತಿರುವ ಅಮೂಲ್ಯ, ಸಾಮಾಜಿಕ ಕೆಲಸಗಳಲ್ಲೂ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಪತಿಯ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.
ಹೌದು, ಅಮೂಲ್ಯ ಪತಿ ಜಗದೀಶ್ ಅವರು ಇತ್ತೀಚಿಗಷ್ಟೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಗದೀಶ್ ಹಟ್ಟುಹಬ್ಬವನ್ನು ಆರ್ ಆರ್ ನಗರದ ಕೊರೊನಾ ವಾರಿಯರ್ ತಂಡದ ಸ್ನೇಹಿತರು ಆಚರಣೆ ಮಾಡಿದ್ದಾರೆ. ರೈತರೊಬ್ಬರಿಂದ ಕರುವನ್ನು ಕೊಂಡು ಅದಕ್ಕೆ ರಾಮ ಎಂದು ನಾಮಕರಣ ಮಾಡಿ, ಗೋಶಾಲೆಗೆ ದಾನ ನೀಡುವ ಮೂಲಕ ಜನ್ಮದಿನದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಗದೀಶ್,’ ರೈತರೊಬ್ಬರಿಂದ ಕರುವನ್ನು ಕೊಂಡು ‘ರಾಮ’ ಎಂದು ನಾಮಕರಣ ಮಾಡಿ, ರಾಷ್ಟ್ರೋತ್ಥಾನ ಗೋಶಾಲೆಗೆ ದಾನವಾಗಿ ನೀಡುವ ಮೂಲಕ ಜನ್ಮದಿನದ ಸಂಭ್ರಮವನ್ನು ಅರ್ಥಪೂರ್ಣವಾಗಿಸಿದರು. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ’ ಎಂದು ಹೇಳಿದ್ದಾರೆ.
ಇತ್ತೀಚಿಗಷ್ಟೆ ಅಮೂಲ್ಯ ದಂಪತಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದರು. ಅಮೂಲ್ಯ ಮತ್ತು ಪತಿ ಜಗದೀಶ್ ಇಬ್ಬರು ಬರೋಬ್ಬರಿ 1.50 ಲಕ್ಷ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ. ದೇಣಿಗೆ ನೀಡಿದ ರಸೀದಿಯ ಚಿತ್ರವನ್ನು ಅಮೂಲ್ಯ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು.