ಪಲಂಪುರ್: ಪತ್ನಿ ಮಾಡಿಸಿದ್ದ ಎಲ್ಐಸಿ ಪಾಲಿಸಿಯ ಹಣವನ್ನು ಪಡೆಯುವುದಕ್ಕೋಸ್ಕರ ಇಲ್ಲೊಬ್ಬ ನೀಚ ಪತಿ ಆಕೆಯನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. ಕೊಲೆ ಮಾಡಿ ಅದು ತಿಳಿಯದಂತೆ ರಸ್ತೆ ಅಪಘಾತ ಎಂದು ಕಥೆಯನ್ನು ಸೃಷ್ಟಿಸಿದ್ದಾನೆ.
ಸುಪಾರಿ ನೀಡಿ ಅಪಘಾತ ಮಾಡಿಸಿರುವ ಈ ನೀಚ ಪತಿಯ ಕುಕೃತ್ಯ ಬೆಳಕಿಗೆ ಬಂದಿದ್ದು ಇದೀಗ ಹಣವೂ ಇಲ್ಲದೇ, ಪತ್ನಿಯನ್ನು ಕೊಲೆ ಮಾಡಿದ್ದಕ್ಕೆ ಜೈಲು ಸೇರಿದ್ದಾನೆ. ಮೂರು ತಿಂಗಳ ಹಿಂದೆ ಮಾಡಿಸಿದ್ದ ಎಲ್ ಐಸಿ ಪಾಲಿಸಿಯಲ್ಲಿ 60 ಲಕ್ಷ ರೂಪಾಯಿ ಬರಬೇಕೆಂದು ಈತ ಈ ರೀತಿ ಮಾಡಿದ್ದಾನೆ!
ಇಂಥದ್ದೊಂದು ಕೃತ್ಯ ಮಾಡಿರುವಾತ ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ಚಾರ್ಟೆರ್ಡ್ ಅಕೌಂಟೆಂಟ್ ಲಲಿತ್ ಟಂಕ್. ಕೊಲೆ ಮಾಡಿ ಅದನ್ನು ಅಪಘಾತ ಎಂದು ಹೇಗೆ ಬಿಂಬಿಸಬೇಕು ಎಂದು ಮೊದಲೇ ಪ್ಲ್ಯಾನ್ ಹಾಕಿಕೊಂಡು ಕೃತ್ಯಕ್ಕೆ ಇಳಿದಿದ್ದ ಈತ ಪತ್ನಿಯನ್ನು ಕಳೆದ ಡಿಸೆಂಬರ್ 26ರಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ.
ಸುಪಾರಿ ಕೊಟ್ಟಿದ್ದ ಆರೋಪಿ ಚಾಲಕನಿಗೆ, ಅಪಘಾತ ಮಾಡುವಂತೆ ಸೂಚಿಸಿದ್ದ. ಅದರಂತೆ ಆತ ಅಪಘಾತ ಮಾಡಿದ್ದಾನೆ. ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂತರ ಅಪಘಾತದಲ್ಲಿ ಮಹಿಳೆಯ ಸಾವು ಎಂದು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಕೆಲ ದಿನಗಳ ನಂತರ ಮಹಿಳೆಯ ಸಂಬಂಧಿಕರು ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸಾವಿನ ಬಗ್ಗೆ ತನಿಖೆ ನಡೆಸಿದಾಗ ಮಹಿಳೆಯನ್ನು ಹತ್ಯೆಗೈಯಲಾಗಿದೆ ಎಂದು ತಿಳಿಯಿತು. ಮತ್ತಷ್ಟು ತನಿಖೆ ನಡೆಸಿದಾಗ ಪತಿಯೇ ಈ ಕೆಲಸ ಮಾಡಿರುವುದು ತಿಳಿದುಬಂದಿದೆ. ಕಿರಿತ್ ಮಾಲಿ ಎಂಬಾತನಿಗೆ 2 ಲಕ್ಷ ರೂಪಾಯಿ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.
ಸದ್ಯ ಲಲಿತ್ ನನ್ನು ಬಂಧಿಸಿರುವ ಪೊಲೀಸರು ಅಪಘಾತ ಮಾಡಿರುವ ಕಿರಿತ್ ಮಾಲಿಗೆ ಬಲೆ ಬೀಸಿದ್ದಾರೆ