ಬೆಂಗಳೂರು, ಫೆ.7: ರಾಜ್ಯ ಸರಕಾರ ಜಾರಿಗೆ ತಂದಿರುವ ವಿವಾದಿತ ಗೋಹತ್ಯೆ ನಿಷೇಧ ಕಾನೂನು ಪ್ರಶ್ನಿಸಿ ಜಮೀಯ್ಯತುಲ್ ಖುರೇಶ್ ಬೀಫ್ ಮರ್ಚೆಂಟ್ ಅಸೋಸಿಯೇಶನ್ ವತಿಯಿಂದ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠ ನಮ್ಮ ಅರ್ಜಿಯನ್ನು ಫೆ.26ರಂದು ವಿಚಾರಣೆ ನಡೆಸಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಖಾಸಿಮ್ ಇಜಾಝ್ ಖುರೇಶಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ನಮ್ಮ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುತ್ತಿದ್ದಾರೆ. ಇದೇ ಕಾನೂನನ್ನು ಪ್ರಶ್ನಿಸಿ ಈಗಾಗಲೇ ಐದು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ. ಆ ಎಲ್ಲ ಅರ್ಜಿಗಳ ವಿಚಾರಣೆಯೂ ಫೆ.26ರಂದೆ ನಡೆಯಲಿದೆ ಎಂದರು.
ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುವ ಉದ್ದೇಶ ನಮಗಿಲ್ಲ. ಅದರಂತೆ, ನಾವು 1964ರ ಕಾನೂನಿನಂತೆ ಈವರೆಗೆ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೇವೆ. ಆದರೆ, ಈಗ ಸರಕಾರ ತಂದಿರುವ ಕಾನೂನು ಕೇವಲ ಮಾಂಸ ಮಾರಾಟ ಮಾಡುವವರ ಮೇಲಷ್ಟೇ ಪರಿಣಾಮ ಬೀರುವುದಿಲ್ಲ, ಇದಕ್ಕೆ ಹೊಂದಿಕೊಂಡಂತಿರುವ ಹಲವಾರು ವರ್ಗಗಳ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಮೇಲೆಯೂ ಗಂಭೀರ ಸ್ವರೂಪದ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
ಜಾನುವಾರುಗಳನ್ನು ಮಾರಾಟ ಮಾಡುವವರು, ಖರೀದಿಸುವವರು, ಸಾಗಾಟ ಮಾಡುವವರು, ಚರ್ಮೋದ್ಯಮ ನಡೆಸುವವರು, ಔಷಧಿ ತಯಾರಿಸುವವರು, ರೈತರು ಸೇರಿದಂತೆ ಇನ್ನಿತರರ ಮೇಲೂ ಈ ಕಾಯ್ದೆ ಜಾರಿಯಿಂದ ಪರಿಣಾಮ ಬೀರುತ್ತಿದೆ. ಸಾವಿರಾರು ಕುಟುಂಬಗಳು ನಿರುದ್ಯೋಗಿಗಳಾಗಿ ಬೀದಿಗೆ ಬಿದ್ದಿವೆ ಎಂದು ಖಾಸಿಮ್ ಇಜಾಝ್ ಖುರೇಶಿ ತಿಳಿಸಿದರು.
ರಾಜ್ಯ ಸರಕಾರ ಈಗ ಜಾರಿಗೆ ತಂದಿರುವ ಜನ ವಿರೋಧಿ ಕಾನೂನನ್ನು ಹಿಂಪಡೆದು, ಈ ಹಿಂದಿನ 1964ರ ಕಾನೂನನ್ನೆ ಪುನಃ ಜಾರಿಗೆ ತರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ನ್ಯಾಯಾಲಯದ ಅಂಗಳದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.