ವಿಜಯಪುರ (ಜನವರಿ.30); ಯುಗಾದಿ ಹಬ್ಬದ ವೇಳೆಗೆ ಮಂತ್ರಿ ಸ್ಥಾನವನ್ನು ಕೊಡುವವರ ಜಾಗದಲ್ಲಿ ನಮ್ಮವರೆ ಬರ್ತಾರೆ ಎಂದು ಹೇಳುವ ಮೂಲಕ ಶಾಸಕ ಹಿರಿಯ ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ಸಿಎಂ ಯಡಿಯೂರಪ್ಪ ಸ್ಥಾನ ಬದಲಾಗಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, “ಈ ಹಿಂದೆ ಮೂರು ತಿಂಗಳಲ್ಲಿ ಬದಲಾವಣೆಯಾಗಲಿದೆ ಎಂದು ಬೇರೆ ವಿಚಾರವಾಗಿ ಹೇಳಿದ್ದೆ. ಈಗ ನೋಡ್ತಾ ಇರಿ, ಯುಗಾದಿಗೆ ಎಲ್ಲವೂ ಬದಲಾಗಲಿದೆ. ಮಂತ್ರಿಗಳನ್ನು ಕೊಡುವವರ ಜಾಗದಲ್ಲಿ ನಮ್ಮವರೆ ಬರ್ತಾರೆ. ಉತ್ತರ ಕರ್ನಾಟಕದವರೇ ಆ ಸ್ಥಾನದಲ್ಲಿ ಇರ್ತಾರೆ” ಎಂದು ಸಿಎಂ ಬದಲಾವಣೆಯ ಕುರಿತು ಯತ್ನಾಳ ಪರೋಕ್ಷವಾಗಿ ಮತ್ತೋಮ್ಮೆ ಹೊಸ ಬಾಂಬ್ ಸಿಡಿಸಿದ್ದಾರೆ.
ಇದೇ ವೇಳೆ ನಿನ್ನೆ ಸಿಂದಗಿಯಲ್ಲಿ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜೊತೆ ತಾವು ಮಾತುಕತೆ ನಡೆಸಿದ ಕುರಿತ ಪ್ರತಿಕ್ರಿಯೆ ನೀಡಿದ ಯತ್ನಾಳ್, “ಎಚ್. ಡಿ. ಕುಮಾರಸ್ವಾಮಿ ತಮ್ಮ ನಡುವೆ ಹಳೆಯ ಸಂಬಂಧವಿದೆ. ನಾವು ಗೆಳೆಯರಾಗಿ ಮಾತನಾಡಿದ್ದೇವೆ. ಕಳೆದ ವರ್ಷ ಸಿದ್ಧರಾಮಯ್ಯ ವಿಜಯಪುರಕ್ಕೆ ಬಂದಾಗ ಅವರೊಂದಿಗೂ ಮಾತನಾಡಿದ್ದೆ. ಅದರಲ್ಲಿ ತಪ್ಪೇನಿದೆ?